ಲಿಂಗ ಆಯ್ಕೆ ನಿಷೇಧ ಪರಿಣಾಮಕಾರಿ ಅನುಷ್ಠಾನ
ಮಡಿಕೇರಿ, ಜೂ. 25 : ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ಹಚ್ಚುವ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಿಸಿ (ಗರ್ಭಪೂರ್ವ) ಮತ್ತು ಪಿಎನ್ಡಿಸಿ (ಪ್ರಸವ ಪೂರ್ವ) ಸಲಹಾ ಸಮಿತಿ ಸಭೆಯಲ್ಲಿ ಲಿಂಗ ಆಯ್ಕೆ ನಿಷೇಧಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು, ವೈದ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದ ಕಾರ್ಯಾಗಾರವನ್ನು ಸದ್ಯದಲ್ಲೇ ಏರ್ಪಡಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಮುತ್ತಪ್ಪ ಅವರು ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಎಲ್ಲಾ ರೀತಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಿವರಾಂ ನಾಯಕ್ ಅವರು ಸಭೆಯಲ್ಲಿ ಮಾತನಾಡಿ ಹೆಣ್ಣು ಭ್ರೂಣ ಹತ್ಯೆಯಾಗಬಾರದು ಎಂಬ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಲೈಡ್ ಶೋ, ಕರಪತ್ರ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ 15 ಅಲ್ಟ್ರಾಸೌಂಡ್ ಕ್ಲಿನಿಕ್ಗಳಲ್ಲಿ 12 ನೊಂದಣಿಯಾಗಿವೆ. 3 ಅಲ್ಟ್ರಾಸೌಂಡ್ ಕ್ಲಿನಿಕ್ಗಳು ಮರು ನವೀಕರಣ ಮಾಡಿಸಿಕೊಳ್ಳಬೇಕಿದೆ ಎಂದರು. ಆರ್ ಸಿಹೆಚ್ ಅಧಿಕಾರಿ ಡಾ ರಾಘವೇಂದ್ರ ಅವರು ಸಭೆಯಲ್ಲಿ ಮಾಹಿತಿ ನೀಡಿ ಹೆಣ್ಣು ಮತ್ತು ಗಂಡಿನ ಲಿಂಗ ಪ್ರಮಾಣದಲ್ಲಿ ಅಂತರ ಕಡಿಮೆಯಾಗುತ್ತಿದೆ ಎಂಬ ದೃಷ್ಟಿಯಿಂದ ಲಿಂಗ ಆಯ್ಕೆ ನಿಷೇಧ ಮಾಡಲಾಗಿದ್ದು, ಇದಕ್ಕಾಗಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)