ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಗುಲಬರ್ಗಾ, ಜೂ.25 : ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಹಶೀಲ್ದಾರ ಕಚೇರಿಯ ಕಂದಾಯ ನಿರೀಕ್ಷಕ ರಾಜಶೇಖರ್ ಅವರು 21 ಜನರಿಗೆ ವೈದ್ಧಾಪ್ಯ ಮತ್ತು ವಿಧವಾ ವೇತನ ಮಂಜೂರು ಮಾಡಲು 1000 ರೂ. ಲಂಚದ ಹಣ ಸ್ವೀಕರಿಸುವಾಗ ಸೋಮವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಯಾದಗಿರಿ ಮಹ್ಮದ್ ನಿಜಾಮುದ್ದಿನ್ 21 ಜನರ ವೃದ್ಧಾಪ್ಯಾ ಹಾಗೂ ವಿಧವಾ ವೇತನ ಮಂಜೂರು ಮಾಡಲು ಅರ್ಜಿಗಳನ್ನು ಎರಡು ವರ್ಷಗಳ ಹಿಂದೆ ಯಾದಗಿರಿ ತಹಶೀಲ್ದಾರರ ಕಚೇರಿಗೆ ಸಲ್ಲಿಸಿದ್ದರು. ತಹಶೀಲ್ದಾರರು ಕಂದಾಯ ನಿರೀಕ್ಷಕ ರಾಜಶೇಖರ್ ಅವರಿಗೆ ಈ ಅರ್ಜಿಗಳನ್ನು ವಿಚಾರಣೆ ನಡೆಸಿ ವರದಿ ನೀಡಲು ಕಳುಹಿಸಿದ್ದರು. ಈ ಅರ್ಜಿಗಳ ಬಗ್ಗೆ 6 ತಿಂಗಳ ಹಿಂದೆ ಕಂದಾಯ ನಿರೀಕ್ಷಕ ರಾಜಶೇಖರ್ ಅವರನ್ನು ವಿಚಾರಿಸಿದಾಗ ಅರ್ಜಿಗಳು ಕಳೆದಿದ್ದು, ಹೊಸ ಅರ್ಜಿ ಸಲ್ಲಿಸಲು ತಿಳಿಸಿದರು.
ಹೊಸ ಅರ್ಜಿಗಳನ್ನು ಪುನಃ ಸಲ್ಲಿಸಿದಾಗ ಪ್ರತಿ ಅರ್ಜಿಗೆ 500 ರೂ. ಲಂಚ ನೀಡಲು ಕಂದಾಯ ನಿರೀಕ್ಷಕರು ತಿಳಿಸಿದರು. ಬಡವರಿದ್ದಾರೆ ಈ ಲಂಚದ ಹಣ ಕಡಿಮೆ ಮಾಡಿ ಎಂದು ಕೋರಿದಾಗ ಎಲ್ಲ ಅರ್ಜಿಗಳ ಮಂಜೂರಿಗೆ 1000 ರೂ. ಲಂಚದ ಹಣ ನೀಡಿದರೆ ಮಂಜೂರು ಮಾಡುವುದಾಗಿ ಹೇಳಿದರು. ಫಿರ್ಯಾದಿಯು ಲಂಚದ ಹಣ ನೀಡಲು ಮನಸ್ಸಿಲ್ಲದ ಕಾರಣ ಜೂನ್ 22 ರಂದು ಯಾದಗಿರ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜೂನ್ 22 ರಂದು ಯಾದಗಿರಿಯನ್ನು ತನ್ನ ಕಚೇರಿಯಲ್ಲಿ ಕಂದಾಯ ನಿರೀಕ್ಷಕ ರಾಜಶೇಖರ್ ಫಿರ್ಯಾದಿ ಮಹ್ಮದ್ ನಿಜಾಮುದ್ದೀನ್ ಅವರಿಂದ 1000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸೆರೆಯಾದರು. ಈ ಕಂದಾಯ ನಿರೀಕ್ಷಕರನ್ನು ದಸ್ತಗಿರಿ ಮಾಡಿ ಕ್ರಮಕೈಗೊಳ್ಳಲಾಗಿದೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಎನ್.ನೀಲಗಾರ ಅವರ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕ ಸಿ.ಎ.ಬಳಮಕರ್, ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ವರಗೌಡ ಮತ್ತು ಸಿಬ್ಬಂದಿಯವರು ಈ ದಾಳಿಯಲ್ಲಿ ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)