ಸರಕಾರಿ ವಾಹನ ನಾಮಫಲಕ ಕನ್ನಡದಲ್ಲಿರಲಿ : ಚಂದ್ರು
ಗುರುವಾರ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೇ ಆಗಿವೆ. ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಆದರೆ, ನಮ್ಮ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕೆಂದರಲ್ಲದೆ, ದೇಶವು ಭಾಷಾವಾರು ಪ್ರಾಂತ್ಯವಾಗಿ ವಿಂಗಡಣೆಯಾಗಿದ್ದು, ಆಡಳಿತಾತ್ಮಕವಾಗಿ, ಸುಲಭವಾಗಿ ಸರ್ಕಾರದ ಸೌಲಭ್ಯ ಹಾಗೂ ಕಾನೂನಿನ ಅರಿವಾಗಲೆಂದು ಅಲ್ಲಿನ ಪ್ರಾಂತ್ಯವಾರು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಪರಿಗಣಿಸಲಾಗಿದೆ ಎಂದರು.
ರಾಜ್ಯದ ಹಲವೆಡೆ ಕನ್ನಡ ಭಾಷೆಯ ಉಲ್ಲಂಘನೆ ನಡೆಯುತ್ತಿದೆ. ಸಾರ್ವಜನಿಕರು ತಪ್ಪು ಮಾಡಿದರೆ ಶಿಕ್ಷೆಯಾಗುತ್ತಿದ್ದು, ಅಧಿಕಾರಗಳ ಮಟ್ಟದಲ್ಲಿ ತಪ್ಪು ಮಾಡಿದರೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಸಾಂಸ್ಕೃತಿಕ ಮತ್ತು ಸುಸಂಸ್ಕೃತಿಯನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕನ್ನಡ ಭಾಷೆಯ ಮೇಲೆ ತಾತ್ಸಾರ ತೋರುತ್ತಿರುವುದು ಎದ್ದು ಕಾಣುತ್ತಿದೆ ಎಂದರು.
ಸರ್ಕಾರಿ ಇಲಾಖೆಯ ಹಲವು ವಾಹನಗಳ ಮೇಲೆ ಆಂಗ್ಲ ಭಾಷೆಯಲ್ಲಿಯೇ ನೋಂದಣಿ ಸಂಖ್ಯೆಯನ್ನು ಬರೆದಿದ್ದು, ಜುಲೈ 15ರೊಳಗಾಗಿ ನಾಮಫಲಕ ಬದಲಾವಣೆಯಾಗಬೇಕೆಂದು ಸೂಚಿಸಿದರು. ಹಾಗೆಯೇ, ಎಲ್ಲಾ ರೀತಿಯ ನಾಮಫಲಕಗಳು ಕನ್ನಡ ಭಾಷೆಯಲ್ಲಿರಬೇಕು. ಇದನ್ನು ಉಲ್ಲಂಘಿಸಿದವರಿಗೆ 10 ಸಾವಿರ ರೂ. ದಂಡದ ಜೊತೆಗೆ ಪರವಾನಿಗೆ ರದ್ದುಪಡಿಸಬೇಕೆಂದು ಹೇಳಿದರು.
ಯಾವುದೇ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು. ಜೊತೆಗೆ, ಕನ್ನಡ ಭಾಷೆಯ ನಾಮಫಲಕ ಬರೆಸುವಂತೆ ಕಂಪನಿಗಳ ಮನಪರಿವರ್ತನೆ ಮಾಡಬೇಕು. ಹೀಗಾಗಿ, ಅಧಿಕಾರಿಗಳು ನಾಮಫಲಕದ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಘನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಚಂದ್ರ, ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.