ಸುತ್ತಿಗೆಯಿಂದ ಹೊಡೆದು ಮಹಿಳೆಯ ಭೀಕರ ಕೊಲೆ
ಶಿವಮೊಗ್ಗ, ಜೂ. 24 : ಕುವೆಂಪು ನಗರದ ಮಾಚೇನಹಳ್ಳಿ ಹಾಲಿನ ಡೈರಿ ಮುಂಭಾಗದ ಜೆಡಿ ಕಟ್ಟೆ ಇಂದು ಬೆಳಗ್ಗೆ ಹಾಡುಹಗಲೇ ಮಹಿಳೆಯೋರ್ವಳನ್ನು ಭೀಕರವಾಗಿ ಕೊಲ್ಲಲಾಗಿದ್ದು, ಕೊಲೆಯಾದ ಮಹಿಳೆಯ ತಂಗಿ ಮಗಳ ಮೇಲೂ ಸಹ ಭೀಕರ ಹಲ್ಲೆ ಮಾಡಲಾಗಿದೆ.
ಕೊಲೆಯಾದ ಮಹಿಳೆಯನ್ನು ಹೇಮಾವತಿ(45) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 11ರ ಸುಮಾರಿಗೆ ಈ ಕೊಲೆ ನಡೆದಿದೆ. ಸುತ್ತಿಗೆಯಿಂದ ತಲೆಗೆ ಹೊಡೆದಿದ್ದರ ಪರಿಣಾಮ ಸ್ಥಳದಲ್ಲೇ ಹೇಮಾವತಿ ಸಾವು ಕಂಡಿದ್ದಾಳೆ. ಇದೇ ಸಂದರ್ಭದಲ್ಲಿ ಹಲ್ಲೆಗೊಳಗಾದ ಹೇಮಾವತಿಯ ತಂಗಿಯ ಮಗಳು ರಶ್ಮಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ : ಹೇಮಾವತಿ ತನ್ನ ತಂಗಿಯ ಮಗಳಾದ ರಶ್ಮಿಯನ್ನು ಸಾಕಿಕೊಂಡಿದ್ದು, ಈಕೆಗೆ ಸಾಗರದ ನಾಗರಾಜ್ ಎಂಬಾತನ ಜೊತೆ ವಿವಾಹ ಮಾಡಿಕೊಟ್ಟಿದ್ದರೂ ಕಳೆದ ಕೆಲವು ತಿಂಗಳುಗಳಿಂದ ದಾಂಪತ್ಯದಲ್ಲಿ ಸಮಸ್ಯೆ ಎದುರಾಗಿ ರಶ್ಮಿ ನಾಗರಾಜ್ ವಿರುದ್ಧ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಳು. ಈ ನಡುವೆ ಸಮಸ್ಯೆ ಬಗೆಹರಿಯುವ ಪರಿಸ್ಥಿತಿ ಕಂಡಾಗ ಪಂಚಾಯತಿಯಲ್ಲಿ ವಿಚ್ಛೇದನ ಅರ್ಜಿ ವಾಪಸ್ ತೆಗೆದುಕೊಳ್ಳುವ ಕುರಿತು ಮಾತುಕತೆ ನಡೆದಿತ್ತು. ಆದರೆ, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಜನ ಪಂಚಾಯತಿಯಾಗಲಿ, ಪೊಲೀಸ್ ಪಂಚಾಯತಿಯಾಗಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.
ಈ ನಡುವೆ ಕಳೆದ 20 ದಿನಗಳಿಂದ ಕಾರವಾರದ ವಾಸಿ ಕ್ರಿಸ್ಟನ್ ಎಂಬಾತನ ಜೊತೆ ರಶ್ಮಿ ಸಲಿಗೆ ಬೆಳೆಸಿಕೊಂಡಿದ್ದಳು. ಇದನ್ನು ಅರಿತ ರಶ್ಮಿಯ ಗಂಡ ಸಾಗರದ ನಾಗರಾಜ್ ಇಂದು ಬೆಳಗ್ಗೆ ಮನೆಗೆ ನುಗ್ಗಿ ಹೇಮಾವತಿ ಹಾಗೂ ತನ್ನ ಪತ್ನಿ ರಶ್ಮಿ ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಲ್ಲಿ ಹೇಮಾವತಿ ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ರಶ್ಮಿ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಭದ್ರಾವತಿ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.