ಸರಬ್ಜೀತ್ ಗೆ ಗಲ್ಲು ಖಾಯಂಗೊಳಿಸಿದ ಪಾಕಿಸ್ತಾನ
ಪಾಕಿಸ್ತಾನದ ಸುಪ್ರಿಂಕೋರ್ಟ್ ನ ನ್ಯಾಯಮೂರ್ತಿ ರಾಜಾ ಫಯ್ಯಾಜ್ ಅಹ್ಮದ್ ನೇತೃತ್ವದ ಮೂವರನ್ನು ಒಳಗೊಂಡ ಪೀಠ ಸರಬ್ಜೀತ್ ಸಿಂಗ್ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ತಿರಸ್ಕರಿಸಿದೆ.1991ರಲ್ಲಿ ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೊಟ ಕೃತ್ಯದಲ್ಲಿ ಸರಬ್ಜೀತ್ ಸಿಂಗ್ ಪಾತ್ರ ಇರುವುದು ಸಾಬೀತಾಗಿದ್ದು, ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನೀಡಿದ ಮರಣದಂಡನೆ ಶಿಕ್ಷೆಯನ್ನೇ ಪಾಕ್ ಸುಪ್ರಿಂಕೋರ್ಟ್ ಎತ್ತಿಹಿಡಿದಿದೆ. ಸರಬ್ಜೀತ್ ಸಿಂಗ್ ಪರ ವಕೀಲ ಕಳೆದ ದಿನಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಸರಬ್ಜೀತ್ ಸಿಂಗ್ ಮರಣ ದಂಡನೆ ಶಿಕ್ಷೆಯನ್ನು ನ್ಯಾಯಾಲಯ ಖಾಯಂಗೊಳಿಸಿದೆ. ರಾಣಾ ಅಬ್ಧುಲ್ ಹಮೀದ್ ಎಂಬ ವಕೀಲರು ಸರಬ್ಜೀತ್ ಸಿಂಗ್ ಪರ ವಾದಿಸುತ್ತಿದ್ದರು. ಪಾಕಿಸ್ತಾನದ ಪಂಜಾಬ್ ಸರಕಾರ ಅವರನ್ನು ನೇಮಿಸಿತ್ತು.
ಕಳೆದ ವರ್ಷ ಏಪ್ರಿಲ್ ನಲ್ಲಿಯೇ ಸರಬ್ಜೀತ್ ಸಿಂಗ್ ಅವರನ್ನು ನೇಣಿಗೇರಿಸಬೇಕಿತ್ತು. ಆದರೆ, ಪಾಕ್ ಪ್ರಧಾನಿ ಯೂಸೆಫ್ ರಾಜಾ ಗಿಲಾನಿ ಮಧ್ಯೆ ಪ್ರವೇಶದಿಂದ ಶಿಕ್ಷೆ ನೀಡುವ ಸಮಯ ಅನಿರ್ಧಿಷ್ಟಾವಧಿ ಮುಂದೂಡಲಾಗಿತ್ತು. 2003ರಲ್ಲಿ ಲಾಹೋರ್ ಹೈಕೋರ್ಟ್ ಸರಬ್ಜೀತ್ ಸಿಂಗ್ ಗೆ ಮರಣ ದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. 2005 ರಲ್ಲಿ ಪಾಕ್ ಸುಪ್ರಿಂಕೋರ್ಟ್ ಲಾಹೋರ್ ಕೋರ್ಟ್ ನ ಆದೇಶವನ್ನು ಎತ್ತಿಹಿಡಿದಿತ್ತು. ಕ್ಷಮಾದಾನ ನೀಡಬೇಕೆಂದು ಸರಬ್ಜೀತ್ ಸಿಂಗ್ ಪಾಕ್ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಸಲ್ಲಿಸಿದ್ದ ಅರ್ಜಿಯನ್ನು ಅವರ ತಿರಸ್ಕರಿಸಿದ್ದರು.
(ಏಜನ್ಸೀಸ್)