ನಾಲೆಡ್ಜ್ ಸಿಟಿಗೆ ಹರಿದು ಬರಲಿದೆ ಎನ್ಆರ್ಐ ಬಂಡವಾಳ
ಬೆಂಗಳೂರಿನ ಆರ್ಥಿಕ ಸ್ಥಿತಿಯನ್ನು ಹಿಡಿದೆತ್ತಲು ಮತ್ತು ಬಡತನವನ್ನು ನಿರ್ಮೂಲ ಮಾಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು 'ನಾಲೆಡ್ಜ್ ಸಿಟಿ' ಎಂಬ ಯೋಜನೆಗೆ ಬುಧವಾರ ಚಾಲನೆ ನೀಡಿದರು. ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿರುವ ಅನಿವಾಸಿ ಕನ್ನಡಿಗರ ಪ್ರತಿನಿಧಿಗಳೊಡನೆ ಯಡಿಯೂರಪ್ಪನವರು ಸಭೆ ನಡೆಸಿದರು.
ವಿಶ್ವದಾದ್ಯಂತ ಸುಮಾರು 700 ಅನಿವಾಸಿ ಭಾರತೀಯರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 10 ಸಾವಿರ ಕೋಟಿ ರು. ಬಂಡವಾಳ ಹರಿದುಬರಲಿದೆ. ಇದಕ್ಕಾಗಿ ಪ್ರತಿ ರಾಷ್ಟ್ರದಲ್ಲಿ ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತಿದೆ. ಯುನೈಟೆಡ್ ಕಿಂಗಡಂ ಪ್ರತಿನಿಧಿಯಾಗಿ ಕನ್ನಡಿಗ ನೀರಜ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಯುಕೆಯಲ್ಲಿಯೂ ಆರ್ಥಿಕ ಮುಗ್ಗಟ್ಟು ಇದ್ದರೂ ಅನೇಕ ಕನ್ನಡಿಗರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ತಯಾರಾಗಿದ್ದಾರೆ. ಬಡತನ ನಿರ್ಮೂಲನೆ ಮಾಡುವುದು ಮತ್ತು ಬೆಂಗಳೂರಿನ ಆರ್ಥಿಕ ನಕ್ಷೆಯನ್ನು ಬದಲಾಯಿಸುವುದು ಸದ್ಯದ ಉದ್ದೇಶ. ಇದಕ್ಕಾಗಿ ಯುರೋಪ್ ನಾದ್ಯಂತ ಬಂಡವಾಳ ಹೂಡಿಕೆದಾರರನ್ನು ಉತ್ತೇಜಿಸುವುದು ಮುಖ್ಯ ಗುರಿ ಎಂದು ನೀರಜ್ ಪಾಟೀಲ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)