ಮಹೇಂದ್ರ ಸಿಂಗ್ ಧೋನಿ ಸಂಬಳ ವಿಳಂಬ!
ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ ಕೆಲಸ ಮಾಡದೆ ದುಡಿಯುತ್ತಿರುವುದು ರೆಕ್ಕೆ ಕತ್ತರಿಸಿ ಬಿದ್ದಿರುವ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ. ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಏರ್ ಇಂಡಿಯಾ ಮತ್ತೆ ಹಾರಾಡಬೇಕೆಂದರೆ ಹತ್ತು ಸಾವಿರದಿಂದ ಹದಿನೈದು ಸಾವಿರ ಕೋಟಿ ರು. ಮೊತ್ತದ ಅಗತ್ಯವಿದೆ. ಇದಕ್ಕಾಗಿ ಈಗಾಗಲೇ ಕೇಂದ್ರ ಸರಕಾರದ ನೆರವನ್ನು ಕೇಳಿದೆ.
ಏರ್ ಇಂಡಿಯಾದಲ್ಲಿ ಇರುವ 31 ಸಾವಿರ ನೌಕರರಿಗೆ ತಿಂಗಳ ಪಗಾರ ನೀಡಲೂ ಪರದಾಡುವಂತಾಗಿದೆ. ಇಂಥ ಸಂಕಷ್ಟ ಸಮಯದಲ್ಲಿ ಕ್ರಿಕೆಟ್ ಗೆ ಕಾಲಿಟ್ಟ ಕೂಡಲೆ ಕೋಟ್ಯಾಧಿಪತಿಗಳಾಗುವ ಕ್ರಿಕೆಟ್ ಆಟಗಾರರು ತಮ್ಮ ಪಗಾರಕ್ಕಾಗಿ ಕಾಯುವಂತಾಗಬೇಕೆ? ಕಷ್ಟಪಟ್ಟು ದುಡಿಯುವ ಸಾಮಾನ್ಯ ನೌಕರರಿಗೇ ನೀಡಲು ದುಡ್ಡಿಲ್ಲದಿರುವಾಗ ನಯಾಪೈಸೆ ಕೆಲಸ ಮಾಡದ ಕ್ರಿಕೆಟ್ ಕಲಿಗಳಿಗೆ ಸಂಬಳವನ್ನೇಕೆ ನೀಡಬೇಕು? ಕ್ರಿಕೆಟ್ ಆಟಗಾರರಿಗೆ ದೇಶದ ಬಗ್ಗೆ, ತಮ್ಮ ಕಂಪನಿಯ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ತಮ್ಮ ಸಂಬಳವನ್ನು ಬಿಟ್ಟುಕೊಡಲಿ ಅಥವಾ ಕೆಲಸಕ್ಕೆ ರಾಜೀನಾಮೆ ನೀಡಲಿ.