ಎಟಿಎಂ ಕಾರ್ಡ್ ಕದ್ದು ಹಣ ಲಪಟಾಯಿಸಿದವನ ಬಂಧನ
ಶಿವಮೊಗ್ಗ, ಜೂ. 22 : ಬೇರೆಯವರ ಎಟಿಎಂ ಕಾರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದ ಜೈಲ್ ರಸ್ತೆಯಲ್ಲಿರುವ ವಿಜಯ ಬ್ಯಾಂಕ್ ಎಟಿಎಂ ಕಾವಲುಗಾರನನ್ನು ದೊಡ್ಡಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ಹೆಸರು ರಾಮಚಂದ್ರ ಅಲಿಯಾಸ್ ರಾಘವೇಂದ್ರ ಅಲಿಯಾಸ್ ಮೇಘರಾಜ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಸಾಗರ ತಾಲ್ಲೂಕಿನ ಕಾಗೋಡು ಎಂಬ ಗ್ರಾಮದವನು.
ಮೇಘರಾಜ ನಗರದ ಹೊಸಮನೆ ಬಡಾವಣೆಯ 2ನೇ ತಿರುವಿನಲ್ಲಿ ವಾಸವಾಗಿದ್ದು, ಕಳೆದ 4 ವರ್ಷಗಳಿಂದ ಜೈಲ್ ರಸ್ತೆಯಲ್ಲಿರುವ ವಿಜಯ ಬ್ಯಾಂಕ್ಗೆ ಸಂಬಂಧಿಸಿದ ಎಟಿಎಂ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. 50ಸಾವಿರ ರೂ.ಗಳನ್ನು ಬೇರೆಯವರ ಎಟಿಎಂ ಕಾರ್ಡ್ನಿಂದ ತೆಗೆಯುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಆರೋಪಿ ಮೇಘರಾಜ್ನ ವಾಸದ ಕೊಠಡಿಯ ಪಕ್ಕದಲ್ಲಿಯೇ ವಾಸವಾಗಿದ್ದರು. ಚಂದ್ರಶೇಖರ್ ಹಿಂದೊಮ್ಮೆ ಮೇಘರಾಜನ ಬಳಿ ಎಟಿಎಂ ಕಾರ್ಡನ್ನು ನೀಡಿ ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಹಣವನ್ನು ಎಟಿಎಂನಿಂದ ತರಿಸಿಕೊಂಡಿದ್ದರು. ಪಾಸ್ವರ್ಡ್ ನೆನಪಿಟ್ಟುಕೊಂಡಿದ್ದ ಮೇಘರಾಜ್ ಪದೇಪದೇ ಚಂದ್ರಶೇಖರ್ ರೂಮಿನಿಂದ ಎಟಿಎಂ ಕಾರ್ಡ್ ಕದ್ದು ಹಣ ಲಪಟಾಯಿಸುತ್ತಿದ್ದ.
ಜೂನ್ 19ರಂದು ಮೇಘರಾಜ್ ತಮ್ಮ ರೂಮಿಗೆ ಬಂದಿದ್ದ. ಬಟ್ಟೆಯಲ್ಲಿದ್ದ ಎಟಿಎಂ ಕಾರ್ಡನ್ನು ಅಪಹರಿಸಿದ್ದ. ನಂತರದಲ್ಲಿ ಅಂದು ರಾತ್ರಿ 11ಗಂಟೆ ನಂತರದಲ್ಲಿ ಮಾನಸ ಆಸ್ಪತ್ರೆ ಎದುರಿನಲ್ಲಿರುವ ಆಕ್ಸಿಸ್ ಬ್ಯಾಂಕಿನಿಂದ 25 ಸಾವಿರ ರೂ. ಹಣ ಡ್ರಾ ಮಾಡಿದ್ದಾನೆ. ಜೂನ್ 20ರಂದು ಬೆಳಿಗ್ಗೆ 5ಗಂಟೆಗೆ ಮತ್ತೆ ಅದೇ ಬ್ಯಾಂಕಿನ ಎಟಿಎಂನಿಂದ 25 ಸಾವಿರ ರೂ. ಹಣವನ್ನು ಲಪಟಾಯಿಸಿದ್ದಾನೆ. ಈ ಕುರಿತು ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ದೊಡ್ಡಪೇಟೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.