ರಸ್ತೆಗಳ ನಿರ್ಮಾಣಕ್ಕೆ 430 ಕೋಟಿ ರುಪಾಯಿ
ಬೆಂಗಳೂರು, ಜೂ. 22 : ರಾಜ್ಯಾದ್ಯಂತ ರಸ್ತೆ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಸರಕಾರ ಶೀಘ್ರದಲ್ಲಿ ಕೈಗೊಳ್ಳಲಿದೆ. ಇದಕ್ಕಾಗಿ 430 ಕೋಟಿ ರುಪಾಯಿಗಳನ್ನು ಬಿಡುಗಡೆಗೊಳಿಸಲಾಗುವುದು. ಅಲ್ಲದೇ ನಂಜಂಡಪ್ಪ ವರದಿಯಲ್ಲಿ ಹಿಂದುಳಿದ ಪ್ರದೇಶಗಳು ಎನ್ನಲಾಗಿರುವ ಪ್ರದೇಶಗಳಿಗೆ ವಿಶೇಷ ಅಧ್ಯತೆ ನೀಡಲಾಗಿದ್ದು, ಅಂತಹ ಪ್ರದೇಶಗಳಿಗೆ ಹೆಚ್ಚುವರಿಯಾಗಿ 230 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ ಎಂ ಉದಾಸಿ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮೊದಲು ಹಿಂದುಳಿದ ಪ್ರದೇಶಗಳು ಎನಿಸಿರುವ 114 ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದರು. ರಾಜ್ಯದ ರಸ್ತೆಗಳ ಕಾಮಗಾರಿಗೆ ಬಜೆಟ್ ನಲ್ಲಿ ಹೆಚ್ಚಿನ ಮೀಸಲಿರಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು. ಅದಕ್ಕೆ ಸುವರ್ಣ ರಸ್ತೆ ಯೋಜನೆ ಎಂದು ಹೆಸರಿಸಲಾಗಿದ್ದು, ಅದಕ್ಕಾಗಿ 200 ಕೋಟಿ ರುಪಾಯಿ ವೆಚ್ಚದಲ್ಲಿ 150 ವಿಧಾನಸಭೆ ಕ್ಷೇತ್ರಗಳ ರಸ್ತೆಗಳ ಕಾಮಗಾರಿ ಶುರು ಮಾಡಲಾಗುವುದು ಎಂದರು.
ಶಿರಾಡಿಘಾಟ್ ರಸ್ತೆ ಸಿಮೆಂಟ್ ರಸ್ತೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ತಗಲುವ ವೆಚ್ಚ 100 ಕೋಟಿ ರುಪಾಯಿಗಳನ್ನು ಕೇಂದ್ರ ನೀಡುವ ಭರವಸೆ ನೀಡಿದೆ. ಅಲ್ಲದೇ, ಮೈಸೂರು ಬಂಟ್ವಾಲ್ ನಡುವಿನ ರಸ್ತೆ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳಲು ರಿಲೈಯನ್ಸ್ ಸಂಸ್ಥೆ ಮುಂದೆ ಬಂದಿದೆ. ಆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮಕೊಳ್ಳಲಾಗುವುದು ಎಂದು ಉದಾಸಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)