ನಕ್ಸಲರು ಭಯೋತ್ಪಾದಕರು, ಪಿ ಚಿದಂಬರಂ
ಕೇಂದ್ರ ಸರಕಾರದ ಹೊರಡಿಸಿರುವ ಅಧಿಸೂಚನೆಗೆ ಪಶ್ಚಿಮ ಬಂಗಾಲದ ಎಡಪಕ್ಷಗಳು ತೀವ್ರವಾಗಿ ವಿರೋಧಿಸಿದ್ದು, ನಕ್ಸಲ್ ಸಂಘಟನೆಗಳ ಮೇಲೆ ಹೇರಲಾಗಿರುವ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ ಮುಖಂಡ ಗುರುದಾಸ್ ಆಗ್ರಹಿಸಿದ್ದಾರೆ. ಇದಕ್ಕೊ ಮೊದಲು ಮಾತನಾಡಿದ ಎಡಪಕ್ಷಗಳ ಮುಖಂಡ ಬಿಮನ್ ಬೋಸ್, ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರುವುದು, ಭಯೋತ್ಪಾದಕ ಸಂಘಟನೆಗಳು ಎನ್ನುವುದು ಸರಿಯಲ್ಲ. ಸಮಾಜ ವಿದ್ರೋಹಿ ಕೆಲಸ ಮಾಡುವ ವ್ಯಕ್ತಿಗಳಿಗೆ ಶಿಕ್ಷೆ ನೀಡೋಣ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಂಘಟನೆಗಳ ಮೇಲೆ ಕಾನೂನು ಹೇರುವುದು ಎಲ್ಲಿಯ ನ್ಯಾಯ. ಇದರಿಂದ ವ್ಯಕ್ತಿ ಸ್ವಾತಂತ್ರ ಕಸಿದುಕೊಂಡಂತಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಲದ ಲಾಲ್ ಗಢದಲ್ಲಿ ನಡೆದಿರುವ ನಕ್ಸಲ್ ರ ವಿಧ್ವಂಸಕ ಕೃತ್ಯಗಳಿಂದ ಕೇಂದ್ರ ಸರಕಾರ ರೋಸಿ ಹೋಗಿದೆ. ಸೇನಾ ಕಾರ್ಯಾಚರಣೆ ನಡೆಸಿದರೂ ಬಗ್ಗದ ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಸಚಿನ ಪಿ ಚಿದಂಬರಂ ಸಿಪಿಐಎಂ ಸಂಘಟನೆ ಮೇಲೆ ನಿಷೇಧ ಹೇರಿದೆ. ಅಲ್ಲದೇ, ದೇಶದ ವಿವಿಧ ಭಾಗಗಳಲ್ಲಿ ನಕ್ಸಲ್ ಹೆಸರಿನಲ್ಲಿ ಸಮಾಜದ ಶಾಂತಿ ಕದಡುತ್ತಿರುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳು, ಅದರಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಹಾಗೂ ಬೆಂಬಲ ನೀಡುವವರು ಭಯೋತ್ಪಾದಕರು ಎಂದು ಪರಿಗಣಿಸಿದೆ. ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಛತ್ತೀಸ್ ಗಢ್, ಜಾರ್ಖಂಡ್, ಪಶ್ಚಿಮ ಬಂಗಾಲ, ಒರಿಸ್ಸಾ, ಬಿಹಾರ್, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಕ್ಸಲ್ ಸಂಘಟನೆಗಳು ವಿವಿಧ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಶ್ಚಿಮ ಬಂಗಾಲ, ಛತ್ತೀಸ್ ಗಢ, ಜಾರ್ಖಂಡ್ ಹಾಗೂ ಒರಿಸ್ಸಾದಲ್ಲಂತೂ ನಕ್ಸಲರ ಹಾವಳಿ ಮೀತಿಮೀರಿದೆ. ಪಶ್ಚಿಮ ಬಂಗಾಲದ ಲಾಲ್ ಗಢ್ ದಲ್ಲಿ ಸರಕಾರ ನಡೆಸುತ್ತಿರುವ ಕೊಂಬಿಂಗ್ ಆಪರೇಷನ್ ವಿರೋಧಿಸಿ ನಾಲ್ಕು ರಾಜ್ಯಗಳಲ್ಲಿ ನಕ್ಸಲರು ಬಂದ್ ಆಚರಣೆ ನಡೆಸುವ ಮೂಲಕ ಸರಕಾರಕ್ಕೆ ಸವಾಲಾಗಿ ನಿಂತಿದ್ದರು. ಅಲ್ಲದೇ, ಅಸಂಖ್ಯ ಪೊಲೀಸ್ ಅಧಿಕಾರಿಗಳು, ಅಮಾಯಕರ ಜೀವಗಳನ್ನು ನಕ್ಸಲ್ ಹೆಸರಿನಲ್ಲಿ ಬಲಿ ತೆಗೆದುಕೊಳ್ಳಲಾಗಿದೆ. ನಕ್ಸಲರೆಂದು ಹೆಸರಿಸಿ, ಬೆದರಿಸಿ ಕಳ್ಳತನ, ದರೋಡೆಯಂತಹ ಪ್ರಕರಣಗಳು ಸಾಕಷ್ಟಿವೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಕೇಂದ್ರಕ್ಕೆ ದಾಳಿ ನಡೆಸಿ, ಮತಕೇಂದ್ರಗಳನ್ನು ನಾಶ ಪಡಿಸುವುದು. ಈ ಮೂಲಕ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಂಡ ಪ್ರಸಂಗಗಳು ನಿತ್ಯ ನಡೆಯುತ್ತಾ ಬಂದಿವೆ.
ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಆಂಧ್ರಪ್ರದೇಶದಲ್ಲಿ ಕೂಡಾ ವಿವಿಧ ನಕ್ಸಲ್ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಗಡಿ ಪ್ರದೇಶಗಳಾದ ರಾಯಚೂರು, ಬಳ್ಳಾರಿ, ಬೀದರ್, ಪಾವಗಡ, ಕೋಲಾರಗಳಲ್ಲಿ ನಕ್ಸಲ್ ಹಾವಳಿ ಇದೆ. ರಾಜ್ಯದ ಮಲೆನಾಡು ಪ್ರದೇಶ ನಕ್ಸಲ್ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕೂಡಾ ನಕ್ಸಲರು ಅನೇಕ ಕಾನೂನು ವಿರೋಧಿ ಕೃತ್ಯಗಳನ್ನು ಎಸಗಿದ್ದಾರೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪೊಲೀಸ್ ಮಾಹಿತಿದಾರರ ಕೊಲೆಗಳು ನಡೆದಿವೆ. ನಕ್ಸಲ್ ಸಂಘಟನೆಗಳ ಕಾರ್ಯಕ್ರಮಗಳನ್ನು ವಿರೋಧಿಸುವವರ ಹತ್ಯೆಗಳಾಗಿವೆ. ಕೆಲವರಿಗೆ ಕೊಲೆ ಬೆದರಿಕೆಯು ಬಂದಿದೆ. ಕಳ್ಳತನ, ದರೋಡೆಯಂತಹ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅನೇಕ ಉದಾಹರಣೆಗಳು ನಮ್ಮಲ್ಲಿವೆ.
ಇಂದು ಕೇಂದ್ರ ಗೃಹ ಇಲಾಖೆ ಉನ್ನತ ಮಟ್ಟದ ಸಭೆ ಕರೆದು ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ದಿಟ್ಟತನದ್ದು ಎನ್ನಬಹುದು. ಅದರ ಇದರ ಪರಿಣಾಮ ಇನ್ನಷ್ಟು ಗಾಢವಾಗುವ ಸಾಧ್ಯತೆಗಳಿವೆ. ನಿಷೇಧ ಇಲ್ಲದಿರುವಾಗ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ಸಂಘಟನೆಗಳು, ನಿಷೇಧಕ್ಕೆ ಒಳಪಟ್ಟ ಮೇಲೆ ಇನ್ನಷ್ಟು ಕ್ರಾಂತಿಕಾರಿಗಳಾಗುವತ್ತ ಹೆಜ್ಜೆ ಇಡಬಹುದು. ಸಮಾಜದ ಶಾಂತಿ ಹಾಳು ಮಾಡುವ ಕೃತ್ಯಕ್ಕೆ ಇಳಿಯಬಹುದು. ಬಲಪಂಥೀಯರನ್ನು ಗುರಿಯಾಗಿರಿಸಿ ಕಾರ್ಯಾಚರಣೆಗೆ ಇಳಿಯಬಹುದು. ನಕ್ಸಲರನ್ನು ವಿರೋಧಿಸುವವರ ಪಟ್ಟಿ ಮಾಡಿಕೊಂಡು ಅವರ ವಿರುದ್ಧ ದಾಳಿಗೆ ನಿಲ್ಲಬಹುದು. ಯಾವುದಕ್ಕೂ ಕೇಂದ್ರ ಇಂದು ಹೊರಡಿಸಿರುವ ಆದೇಶವನ್ನು ಪುನರ್ ಪರಿಶೀಲನೆ ನಡೆಸುವುದು ಸೂಕ್ತ.
(ದಟ್ಸ್ ಕನ್ನಡ ವಾರ್ತೆ)