ರಾಜ್ಯ ಚುನಾವಣೆ ಆಯೋಗಕ್ಕೆ ಚಿಕ್ಕಮಠ ಆಯುಕ್ತ
ಬೆಂಗಳೂರು, ಜೂ.21: ರಾಜ್ಯ ಚುನಾವಣೆ ಆಯೋಗದ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಸಿಆರ್ ಚಿಕ್ಕಮಠ ನೇಮಕಗೊಂಡಿದ್ದಾರೆ. ಅಯುಕ್ತ ಎಂ ಆರ್ ಹೆಗಡೆ ಅವರ ಸ್ಥಾನವನ್ನು ಚಿಕ್ಕಮಠ ತುಂಬಲಿದ್ದಾರೆ. ಸರ್ಕಾರದ ಈ ಪ್ರಸ್ತಾವನೆಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅಂಕಿತ ಹಾಕಿದ್ದಾರೆ.
ಇಂದಿನಿಂದ 5 ವರ್ಷ ಅಥವಾ ಅಯುಕ್ತರಿಗೆ 65 ವರ್ಷ ತುಂಬುವದಾಲ್ಲಿ ಯಾವುದು ಮೊದಲೋ ಅಂದಿಗೆ ಅವಧಿ ಮುಕ್ತಾಯವಾಗಲಿದೆ. ಹಿರಿಯ ಐಎಎಸ್ ಅಧಿಕಾರಿ , ಕಾನೂನು ಕಾರ್ಯದರ್ಶಿ ಆಗಿರುವವರನ್ನು ಚುನಾವಣಾ ಆಯೋಗದ ಅಯುಕ್ತರನ್ನಾಗಿ ಆಯ್ಕೆ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ರೂಢಿ. ಅದೇ ರೀತಿ ಈಗ ಸರ್ಕಾರ ಚಿಕ್ಕಮಠ್ ಅವರ ಆಯ್ಕೆ ಮಾಡಿದೆ.
ರಾಜ್ಯದ ಐದನೇ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿರುವ ಚಿಕ್ಕಮಠ, ಮುಂದಿನ ಐದು ವರ್ಷಗಳ ಅವಧಿಯವರೆಗೆ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. 1976 ರಲ್ಲಿ ಕೆಎಎಸ್ ಅಧಿಕಾರಿಯಾಗಿ ನೇಮಕ ಹೊಂದಿದ್ದ ಚಿಕ್ಕಮಠ, 1990 ರಲ್ಲಿ ಐಎಎಸ್ ಹುದ್ದೆಗೆ ಬಡ್ತಿ ಪಡೆದರು. ಆರಂಭದಲ್ಲಿ ಪಾಂಡವಪುರದಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ನೇಮಕ ಹೊಂದಿದ್ದ ಅವರು, ಬಳಿಕೆ ಮೈಷುಗರ್ಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ, ನವದೆಹಲಿಯಲ್ಲಿನ ಸ್ಥಾನಿಕ ಉಪ ಆಯುಕ್ತ ಮುಂತಾದ ಹುದ್ದೆಗಳನ್ನು ನಿರ್ವಹಿಸಿದ್ದರು.
ಐಎಎಸ್ ಗೆ ಬಡ್ತಿ ಪಡೆದ ಬಳಿಕ ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ತಂಬಾಕು ಮಂಡಳಿ, ರೇಷ್ಮೆ ಮಂಡಳಿ, ಕೈಗಾರಿಕೆ ಮತ್ತು ಅಬಕಾರಿ ಇಲಾಖೆಗಳ ಆಯುಕ್ತರಾಗಿದ್ದರು. ಚುನಾವಣಾ ಅಯುಕ್ತರಾಗುವ ಮುನ್ನ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
(ದಟ್ಸ್ ಕನ್ನಡ ವಾರ್ತೆ)