ಬೆಂಗಳೂರು ವಿವಿ ಪ್ರಶ್ನೆಪತ್ರಿಕೆ ಬಹಿರಂಗ
ಬೆಂಗಳೂರು, ಜೂ. 21 : ಬೆಂಗಳೂರು ವಿವಿಯ ಬಿಕಾಂ ಪರೀಕ್ಷೆಯ ಫೈನಾನ್ಸಿಯಲ್ ಅಕೌಂಟಿಂಗ್ ಪ್ರಶ್ನೆ ಪತ್ರಿಕೆ, ಶನಿವಾರ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು ಹಾಗೂ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲು ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿದೆ.
ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಾರ್ಯಕರ್ತರ ರಹಸ್ಯ ಕಾರ್ಯಾಚರಣೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ವಿವಿ ಅಂಚೆ ತೆರಪಿನ ಶಿಕ್ಷಣ ವಿಭಾಗದ ಬಿಕಾಂ 4 ನೇ ಸೆಮಿಸ್ಟರ್ ಪರೀಕ್ಷೆ ಶನಿವಾರ ಇತ್ತು. ಜಯನಗರದ ಮೇವಾ ಕಾಲೇಜಿನಲ್ಲಿ ಬೆಳಗ್ಗೆ ಪರೀಕ್ಷೆ ಆರಂಭಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿತು.
ರಾಜ್ಯಶಾಸ್ತ್ರ ಉಪನ್ಯಾಸಕ, ಗುಮಾಸ್ತ ಹಾಗೂ ಅಟೆಂಡರ್ ಸೇರಿ ವಿದ್ಯಾರ್ಥಿಗಳಿಗೆ ಮೂರು ಸಾವಿರ ರುಪಾಯಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದರು. ಜತೆಯಲ್ಲೇ ಉತ್ತರ ಪತ್ರಿಕೆಯನ್ನೂ ನೀಡಲಾಗುತ್ತಿತ್ತು. ಕೊನೆಗೆ ವಿದ್ಯಾರ್ಥಿ ಉತ್ತರ ಬರೆದು ಉಪನ್ಯಾಸಕರಿಗೆ ನೀಡಿದರೆ, ಉತ್ತರ ಪತ್ರಿಕೆಯ ಬಂಡಲ್ ಸೇರಿಸುವುದಾಗಿ ಭರವಸೆ ನೀಡಲಾಗಿತ್ತು. ಪ್ರಕರಣ ಬಹಿರಂಗಗೊಂಡ ಕೂಡಲೇ ಬೆಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ವಿವಿ ಕುಲಪತಿ ಡಾ ಎನ್ ಪ್ರಭುದೇವ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಫೈನಾನ್ಸಿಯಲ್ ಅಕೌಂಟಿಂಗ್ ಮರುಪರೀಕ್ಷೆ ನಡೆಸಲು ಕಾಲೇಜಿನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಪ್ರಕರಣವನ್ನು ಸಿಸಿಬಿ ಪೊಲೀಸರ ತನಿಖೆಗೊಳಪಡಿಸುವಂತೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)