ನಕ್ಸಲ್ ಯುವತಿ ವಿಜಯಬಾಯಿ ಪೊಲೀಸ್ ಕಸ್ಟಡಿಗೆ
ಮೂಲತಃ ಶಿವಮೊಗ್ಗ ತಾಲ್ಲೂಕಿನ ಬೆಳಲಕಟ್ಟೆ ಗ್ರಾಮದ ವಾಸಿಯಾಗಿರುವ ವಿಜಯಬಾಯಿ ನಕ್ಸಲ್ ನಾಯಕ ಮನೋಹರ್ ಸಂಪರ್ಕಕ್ಕೆ ಬಂದ ನಂತರದಲ್ಲಿ ನಕ್ಸಲ್ ತತ್ತ್ವಗಳಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಳು. ನಂತರದಲ್ಲಿ ಮನೋಹರ್ ಜೊತೆಗಿನ ಒಡನಾಟ ಪ್ರೀತಿಗೆ ಬದಲಾಯಿತು. ಮನೋಹರ್ ಆರಂಭದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆ ನಂತರದಲ್ಲಿ ಶಿವಮೊಗ್ಗ ಜಿಲ್ಲಾ ಎಸ್ಪಿಯಾಗಿದ್ದ ಅರುಣ್ ಚಕ್ರವರ್ತಿಯವರ ಮಾರ್ಗದರ್ಶನದಲ್ಲಿ ನಕ್ಸಲ್ ಪ್ರಪಂಚದಿಂದ ಹೊರಕ್ಕೆ ಬಂದಿದ್ದ.
ಎಲ್ಲದನ್ನೂ ಕೈಬಿಟ್ಟಿದ್ದೇನೆ ಎಂದು ಹೇಳಿಕೊಂಡು ಶಿವಮೊಗ್ಗದ ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸತೊಡಗಿದ್ದ. ಈ ಸಂದರ್ಭದಲ್ಲಿ ಪತ್ರಿಕೆಯ ಕೆಲಸಕ್ಕೆಂದು ಬಂದ ಬೆಳಲಕಟ್ಟೆ ಗ್ರಾಮದ ವಿಜಯಬಾಯಿ ಪತ್ರಕರ್ತ ಮನೋಹರ್ನ ಅಂಕಣಗಳಿಗೆ ಮನಸೋತು ನಕ್ಸಲ್ ವಾದದ ಕುರಿತು ಆಸಕ್ತಿ ತೋರಿದಳು. ಈ ಮಧ್ಯೆ ಮನೋಹರ್ ಇದ್ದಕ್ಕಿದ್ದ ಹಾಗೆ ಶಿವಮೊಗ್ಗದಿಂದ ತಲೆಮರೆಸಿಕೊಂಡಿದ್ದ. ಇದೇ ಸಂದರ್ಭದಲ್ಲಿ ವಿಜಯಬಾಯಿ ಸಹ ನಾಪತ್ತೆಯಾಗಿದ್ದಳು.
ಮನೋಹರ್ ಮತ್ತೆ ನಕ್ಸಲ್ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಮಾವಿನ ಹೊಲ ಎಂಬಲ್ಲಿ ಮನೋಹರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಬದಲಿಗೆ ಮನೋಹರ್ ನಿಂದಲೂ ಗುಂಡಿನ ದಾಳಿ ಪೊಲೀಸರ ಮೇಲೆ ನಡೆಯಿತು. ಅಂತಿಮವಾಗಿ ಮನೋಹರ್ ಪೊಲೀಸರ ಎನ್ಕೌಂಟರ್ಗೆ ಬಲಿಯಾದ. ಈ ಎನ್ಕೌಂಟರ್ ಸಂದರ್ಭದಲ್ಲಿ ಮನೋಹರ್ ಜೊತೆಗೆ ಆತನ ಪ್ರೇಯಸಿ ವಿಜಯಬಾಯಿ ಸಹ ಇದ್ದಿದ್ದು, ಪೊಲೀಸರ ಮೇಲೆ ಗುಂಡು ಹಾರಿಸಿದ್ದನ್ನು ಪೊಲೀಸ್ ಇಲಾಖೆಯ ಮೂಲಗಳು ದೃಢಪಡಿಸಿದ್ದವು. ಮಾವಿನ ಹೊಲ ಎನ್ಕೌಂಟರ್ ನಂತರ ಈ ವಿಜಯಬಾಯಿಯನ್ನು ಕೊನೆಗೂ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.