ಗಂಗೂಬಾಯಿ ದರ್ಶನಕ್ಕೆ ಸಿಸಿಟಿವಿ ಕ್ಯಾಮರಾ
ಇಲ್ಲಿನ ಗೋಕುಲ್ ರಸ್ತೆಯಲ್ಲಿರುವ ಲೈಫ್ ಲೈನ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಗಂಗೂಬಾಯಿಯವರನ್ನು ದಾಖಲಿಸಲಾಗಿದೆ. ರೋಗಿಗಳ ಹಿತದೃಷ್ಟಿ ಮತ್ತು ನೈರ್ಮಲ್ಯ ಕಾಪಾಡಲು ಐಸಿಯುನಲ್ಲಿ ವೈದ್ಯರ ಅನುಮತಿಯಿಲ್ಲದೇ ಯಾರೂ ಒಳಗೆ ಹೋಗುವಂತಿಲ್ಲ. ಕಳೆದೆರಡು ದಿನಗಳಿಂದ ಚೇತರಿಸಿಕೊಳ್ಳುತಿರುವ ಗಂಗಜ್ಜಿಯ ಭೇಟಿಯಾಗಲು ಶಾಸಕರ, ಪಾಲಿಕೆ ಸದಸ್ಯರ ಬಳಗ ಬರುತ್ತಿದೆ. ಅವರಿಗಾಗಿ ಆಸ್ಪತ್ರೆ ಒಂದು ಉಪಾಯ ಹುಡುಕಿದೆ. ಆಸ್ಪತ್ರೆಯಲ್ಲಿರುವ ಸಿಸಿಟಿವಿ ಕ್ಯಾಮರಾವನ್ನು ಐಸಿಯುನಲ್ಲಿ ಅಳವಡಿಸಿ, ಆಡಳಿತಾಧಿಕಾರಿ ಕೋಣೆಯಲ್ಲಿರುವ ಕಂಪ್ಯೂಟರ್ ಗೆ ಕಲ್ಪಿಸಲಾಗಿದೆ. ಇದರ ಪುಟ್ಟ ಪರದೆಯ ಮೇಲೆ ಪ್ರೀತಿಯ ಅಮ್ಮನನ್ನು ಕಣ್ತುಂಬಾ ನೋಡಿ ಹೋಗುವ ವ್ಯವಸ್ಥೆ ಮಾಡಲಾಗಿದೆ.
ಕೃಷ್ಣ, ಪಾಪು ಹಾರೈಕೆ
ದೇವರು ನಿಮ್ಮ ಆಯುಷ್ಯ ಮತ್ತು ಆರೋಗ್ಯವನ್ನು ವೃದ್ಧಿಸಲಿ. ದೇಶದ ಸಾಂಸ್ಕೃತಿಕ ಸಂಪತ್ತಾಗಿರುವ ನೀವು ಬೇಗ ಗುಣಮುಖರಾಗಬೇಕು ಎಂದು ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ಗಂಗಜ್ಜಿಗೆ ದೂರವಾಣಿ ಮೂಲಕ ಕರೆ ಮಾಡಿದ ಕೇಂದ್ರದ ವಿದೇಶಾಂಗ ಮಂತ್ರಿ ಎಸ್ ಎಂ ಕೃಷ್ಣ ಅವರ ಕಳಕಳಿಯ ನುಡಿಗಳಿವು. ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಗಂಗೂಬಾಯಿ ಹಾನಗಲ್ ಅವರಿಗೆ ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಈ ಪ್ರಶಸ್ತಿ ಪಡೆಯುವ ಮೂಲಕ ಹಿರಿಯ ಜೀವಕ್ಕೆ ಗೌರವ ಸಲ್ಲಿಸಬೇಕು ಎಂದು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)