ಡಿಕೆಶಿ, ಆರೋಪ ಸಾಬೀತು ಮಾಡಿ :ಬಿಜೆಪಿ
ಬೆಂಗಳೂರು, ಜೂ. 16 : ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪದವಿಯ ಪ್ರಶ್ನೆ ಪತ್ರಿಕೆ ಬಹಿರಂಗ ಸಂಬಂಧ ಸಚಿವ ಅರವಿಂದ ಲಿಂಬಾವಳಿ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಿರುವ ಆರೋಪವನ್ನು ಸಾಬೀತು ಮಾಡುವಂತೆ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದೆ. ಆರೋಪ ಸಾಬೀತು ಮಾಡಿ ಇಲ್ಲವಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಶಿವಕುಮಾರ್ ಗೆ ಅವರು ಬಹಿರಂಗ ಸವಾಲೊಡ್ಡಿದೆ.
ಶಾಸಕ ಸಿ ಟಿ ರವಿ ಮತ್ತು ಧನಂಜಯ ಕುಮಾರ್ ಈ ಸಂಬಂಧ ಹೇಳಿಕೆ ನೀಡಿ ಪ್ರಶ್ನೆ ಪತ್ರಿಕೆಯನ್ನು ಬಹಿರಂಗಪಡಿಸುವಷ್ಟು ಕೀಳುಮಟ್ಟಕ್ಕೆ ಬಿಜೆಪಿ ಇಳಿದಿಲ್ಲ. ಡಿಕೆಶಿ ಸಾಕ್ಷಿ ಸಮೇತ ಆರೋಪವನ್ನು ಸಾಬೀತು ಪಡಿಸಲಿ. ಬಿಕಾಂ ಪ್ರಶ್ನೆ ಪತ್ರಿಕೆ ಬಹಿರಂಗ ಸಂಬಂಧ ಸರಕಾರ ತನಿಖೆಗೆ ಮುಂದಾಗಿದೆ. ಭಯೋತ್ಪಾದನಾ ವಿರೋಧಿ ಆಂದೋಲನದ ಯಶಸ್ಸನ್ನು ಕಂಡು ಶಿವಕುಮಾರ್ ಹತಾಶ ಮನೋಭಾವದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದರು.
ಭಯೋತ್ಪಾದನಾ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದ ಎಬಿವಿಪಿ ಘಟಕದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಇರಾದೆಯಿಂದ ಪ್ರಶ್ನೆ ಪತ್ರಿಕೆಯನ್ನು ಸಚಿವ ಅರವಿಂದ ಲಿಂಬಾವಳಿಯವರೇ ಬಹಿರಂಗ ಪಡಿಸಿದ್ದಾರೆಂದು ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)