ವಲಸೆಹಕ್ಕಿ ವಿ. ಸೋಮಣ್ಣಗೆ ಮಂತ್ರಿಗಿರಿ ಖಚಿತ!
ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ವಿದ್ಯಮಾನಗಳು ಸೇರಿದಂತೆ ಸಂಪುಟ ವಿಸ್ತರಣೆಯ ಬಗ್ಗೆ ಆರ್ಎಸ್ಎಸ್ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಆದರೆ, ಸೋಮಣ್ಣ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸದ್ಯ ಸಚಿವರಾಗಿರುವ ಒಬ್ಬರ ತಲೆದಂಡ ಅನಿವಾರ್ಯವಾಗಿದೆ. ಯಾರು ಸಂಪುಟದಿಂದ ಕೊಕ್ ಪಡೆದುಕೊಳ್ಳುತ್ತಾರೆ ಎನ್ನುವುದು ಮಾತ್ರ ಬಿಟ್ಟುಕೊಡದ ಗುಟ್ಟು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡ ಶಾಸಕರಿಗೆ ಸ್ಥಾನಮಾನ ನೀಡುವುದಕ್ಕಾಗಿ ಹೈದರಾಬಾದ್ ಕರ್ನಾಟಕದ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರನ್ನು ರಾಜೀನಾಮೆ ಪಡೆದುಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಭಾರಿ ಮುಜುಗರಕ್ಕೆ ಒಳಗಾಗಿದ್ದರು.
ಇದರ ಜೊತೆಗೆ ಸ್ಪೀಕರ್ ಜಗದೀಶ ಶೆಟ್ಟರ್ ಅವರ ಹೆಸರು ಮಂತ್ರಿ ಸ್ಥಾನಕ್ಕೆ ಕೇಳಬರತೊಡಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಸೋಮಣ್ಣ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಸಾಕು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಪಕ್ಷದಲ್ಲಿ ಎದ್ದಿದ್ದ ಭಿನ್ನಮತ ಮೇಲ್ನೋಟಕ್ಕೆ ತಣ್ಣಗಾಗಿದೆ ಎಂದು ಭಾಸವಾದರೂ, ಬೂದಿ ಮುಚ್ಚಿದ ಕೆಂಡದಂತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಇತ್ತೀಚೆಗೆ ಅರುಣ್ ಜೈಟ್ಲಿ ಬೆಂಗಳೂರಿಗೆ ಆಗಮಿಸಿದಾಗ ರೆಡ್ಡಿ ಸಹೋದರರು ತಿರುಪತಿಯಲ್ಲಿದ್ದರು. ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳುವ ಸಲುವಾಗಿ ಕೋರ್ ಕಮೀಟಿಯನ್ನು ರಚಿಸಬೇಕು ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಆದರೆ, ರೆಡ್ಡಿಗಳ ಬೇಡಿಕೆಗಳು ಏನೆಂಬುದು ಗೊತ್ತಾಗಿಲ್ಲ.
ಬಿಬಿಎಂಪಿ ಚುನಾವಣೆಗಳು ಹತ್ತಿರ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶತಾಯಗತಾಯ ಬೆಂಗಳೂರಿನ ಅಧಿಕಾರವನ್ನು ಬಿಜೆಪಿ ತನ್ನ ಕೈವಶ ಮಾಡಿಕೊಳ್ಳಲು ತಂತ್ರ ಹೆಣೆಯತೊಡಗಿದೆ. ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಆರಂಭವಾದ ನಂತರ ಸಂಪುಟ ಪುನಾರಚನೆಯನ್ನು ಕೈಬಿಡಲಾಗಿತ್ತು. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸೋಮಣ್ಣ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲೇಬೇಕಾಗಿದೆ. ಬಿಜೆಪಿ ಸಚಿವರನ್ನು ಕೈಬಿಡಲು ಸಿಎಂಗೆ ಮನಸ್ಸಿಲ್ಲ. ಆದರೆ, ಪಕ್ಷೇತರ ಸಚಿವರಲ್ಲಿ ಒಬ್ಬರನ್ನು ಕೈಬಿಡಲು ಚಿಂತನೆ ಆರಂಭವಾಗಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)