ಉಪಪ್ರಾಂಶುಪಾಲರನ್ನು ಕೊಲೆಗೈದ ಮ್ಯಾನೇಜರ್
ಮೈಸೂರು ಜೂ 11: ಇಲ್ಲಿನ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪುಟ್ಟಣ್ಣ ಎನ್ನುವವರು ಕಾಲೇಜ್ ನ ಉಪಪ್ರಾಂಶುಪಾಲರಾದ ಚಂದ್ರಲೇಖಾ ಎನ್ನುವವರನ್ನು ಕೊಲೆಗೈದಿರುವ ಘಟನೆ ನಿನ್ನೆ ನಡೆದಿದೆ. ಕೆಲಸಕ್ಕೆ ಸರಿಯಾದ ಸಮಯದಲ್ಲಿ ಹಾಜರಾಗದೇ ಇರುವುದು ಮತ್ತು ಕೆಲಸದ ವೇಳೆ ಕಾಲೇಜ್ ನಲ್ಲಿ ಇಲ್ಲದಿರುವ ಕಾರಣಕ್ಕಾಗಿ ಚಂದ್ರಲೇಖ ಅವರು ಪುಟ್ಟಣ್ಣ ಅವರನ್ನು ಕೆಲಸದಿಂದ ವಜಾ ಮಾಡಿದ್ದರು.
ನಿನ್ನೆ 11 ಘಂಟೆಯ ಸುಮಾರಿಗೆ ಉಪಪ್ರಾಂಶುಪಾಲರ ಕಚೇರಿಯಿಂದ ಪುಟ್ಟಣ್ಣ ಅವರಿಗೆ ಕೆಲಸ ವಜಾಗೊಂಡ ಆದೇಶ ತಲುಪಿತು. ಇದರಿಂದ ಕೋಪಗೊಂಡ ಪುಟ್ಟಣ್ಣ ಮೊದಲು ಚಂದ್ರಲೇಖಾ ಅವರ ನಾಲಗೆಯನ್ನು ಕತ್ತರಿಸಿ ನಂತರ ಅವರನ್ನು ಚಾಕುವಿನಿಂದ ತಿವಿದ. ಚಂದ್ರಲೇಖ ಅವರು ತಮ್ಮ ಕೊಠಡಿಯಲ್ಲೇ ಸಾವನ್ನಪ್ಪಿದರು. ವಿಷಯ ತಿಳಿದ ಕಾಲೇಜಿನ ಪ್ರಾಂಶುಪಾಲರು ಈತನನ್ನು ಸಮೀಪದ ಅಶೋಕ್ ನಗರ ಠಾಣೆಗೆ ಒಪ್ಪಿಸಿದರು.
ಕಾಲೇಜಿನ ಅಧ್ಯಕ್ಷ ರಂಗ ಅಯ್ಯಂಗಾರ್ ಅವರ ಹೇಳಿಕೆಯಂತೆ ಪುಟ್ಟಣ್ಣ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಆತನ ಕೋರಿಕೆಯಂತೆ ಅವನನ್ನು ಕೆಲಸದಿಂದ ಕೈಬಿಡಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆರೋಪಿ ಪುಟ್ಟಣ್ಣ, ಚಂದ್ರಲೇಖಾ ಅವರು ನನಗೆ ಬಹಳ ಅವಮಾನ ಮಾಡುತ್ತಿದ್ದರು ಅದಕ್ಕೆ ಈ ರೀತಿಯ ಕೃತ್ಯ ಎಸಗಿದೆ ಎಂದು ಹೇಳಿಕೆ ನೀಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)