ಮತ್ತೊಂದು ಸಮಸ್ಯೆ ತಂದುಕೊಂಡ ಸರಕಾರ
ಹಿಂದುಳಿದ ಆಯೋಗ ಸರಕಾರದ ಆದೇಶವನ್ನು ತೀವ್ರವಾಗಿ ವಿರೋಧಿಸಿದ್ದು, ಜೂನ್ 16 ರಂದು ಹಿಂದುಳಿದ ಆಯೋಗದ ಸಭೆ ಕರೆಯಲಾಗಿದೆ. ಅಂದು ಸರಕಾರದ ಸುತ್ತೋಲೆಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ಆಯೋಗದ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಸ್ಪಷ್ಟಪಡಿಸಿದ್ದಾರೆ.
ಸರಕಾರ ಯಾವುದೇ ಸುತ್ತೋಲೆ ಹೊರಡಿಸಬೇಕೆಂದರೆ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಅವಲೋಕನ ಮಾಡಬೇಕಾಗುತ್ತದೆ. ಆದರೆ, ಸರಕಾರ ಇದಾವುದನ್ನು ಮಾಡದೇ ಏಕಾಏಕಿಯಾಗಿ ಸುತ್ತೋಲೆಯನ್ನು ಹೊರಡಿಸಿದೆ. ಕುಲಕಸಬುಗಳನ್ನು ನಂಬಿ ಜೀವನ ನಡೆಸುತ್ತಿರುವ ಹಾಗೂ ಅತ್ಯಂತ ನಿರ್ಗತಿಕ 102 ಜಾತಿಗಳು ಪ್ರವರ್ಗ 2ಬಿಯಲ್ಲಿವೆ. ಇದೀಗ ಸಾದರ ಲಿಂಗಾಯತದಂತಹ ಮುಂದುವರೆದ ಜನಾಂಗವನ್ನು ಪ್ರವರ್ಗಕ್ಕೆ ಸೇರಿಸಿ 102 ಜಾತಿಗಳಿಗೆ ಅನ್ಯಾಯ ಮಾಡಲು ಸರಕಾರ ಹೊರಟಿದೆ. ಇದು ಅತ್ಯಂತ ಖಂಡನೀಯ ಕೆಲಸವಾಗಿದೆ ಎಂಜು ದ್ವಾರಕಾನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾದರ ಲಿಂಗಾಯತ ಮುಖಂಡರ ಒತ್ತಡಕ್ಕೆ ಮಣಿದು ಸರಕಾರ 102 ಜಾತಿಗಳ ಹಿತಾಶಕ್ತಿಗೆ ಧಕ್ಕೆ ತರುವಂತಹ ಕೆಲಸವನ್ನು ಇಂದು ಮಾಡಿದೆ. ಜೂನ್ 16ರಂದು ಹಿಂದುಳಿದ ಆಯೋಗದ ಸಭೆ ಕರೆಯಲಾಗಿದ್ದು, ಅಲ್ಲಿಯವರೆಗೆ ಯಾವ ಕಾರಣಕ್ಕೂ ಸಾದರ ಲಿಂಗಾಯತರಿಗೆ ಪ್ರವರ್ಗ 2ಬಿ ಪ್ರಮಾಣಪತ್ರವನ್ನು ನೀಡಬಾರದು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)