ಬಿಐಎಎಲ್ ಕುಂದುಕೊರತೆಗೆ ಪರಿಹಾರ : ಪಟೇಲ್
ಬೆಂಗಳೂರು ವಿಮಾನಯಾನ ಅಭಿವೃದ್ಧಿ ಜಂಟಿ ಸದನ ಸಮೀಕ್ಷೆ ಸಮಿತಿ ಯ 20 ಜನ ಶಾಸಕರ ನಿಯೋಗವು ಪ್ರಫುಲ್ ಪಟೇಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸಚಿವರು ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬೆಂಗಳೂರು ವಿಮಾನ ನಿಲ್ದಾಣದ ಅವ್ಯವಸ್ಥಿತ ವಾಸ್ತುಶಿಲ್ಪ, ಮೂಲಭೂತ ಸೌಕರ್ಯಗಳ ಕೊರತೆ, ಗಣ್ಯರಿಗೆ ಸೂಕ್ತ ಸೌಕರ್ಯಗಳ ಕೊರತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಕ್ಷಣಗಳಿಲ್ಲದಿರುವುದು, ಶಾಸಕರು ಮತ್ತು ಜನ ಪ್ರತಿನಿಧಿಗಳಿಗೆ ದಕ್ಕದ ಸೌಲಭ್ಯಗಳು, ಅಪರಿಮಿತ ಸುಲಿಗೆ- ಮುಂತಾದ ಎಲ್ಲ ಅಂಶಗಳನ್ನು ಇಂದು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಸಾರ್ವಜನಿಕರು ಮತ್ತು ಸರ್ಕಾರ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸೂಕ್ತ ಗಮನ ಹರಿಸಿ, ಅವುಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ. ಹೇಮಚಂದ್ರ ಸಾಗರ್ ಅವರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೈದ್ರಾಬಾದ್ ವಿಮಾನ ನಿಲ್ದಾಣದಂತಹ ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ಲಕ್ಷಣಗಳಿಲ್ಲ, ಹಲವಾರು ಕುಂದು ಕೊರತೆಗಳನ್ನು ಅದು ಅನುಭವಿಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಪ್ರಯಾಣಿಕರು ಅನುಭವಿಸುತ್ತಿರುವ ಕೊರತೆ ಮತ್ತು ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಬೇಕು ಎಂದು ಕೋರಲಾಯಿತು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾರ್ವಜನಿಕರು ಮತ್ತು ಸರ್ಕಾರ ಎದುರಿಸುತ್ತಿರುವ ಸಮಸ್ಯೆಗಳನ್ನು ಇಂದು ನಾವು ಕೇಂದ್ರ ಸಚಿವರ ಗಮನಕ್ಕೆ ತಂದೆವು. ಇದೊಂದು ಅಂತಾರಾಷ್ಟ್ರೀಯವಲ್ಲದ ವಿಮಾನ ನಿಲ್ದಾಣವಾಗಿದ್ದು, ನೂರಾರು ಸಮಸ್ಯೆಗಳ ಆಗರವಾಗಿದೆ. ಅದೆಲ್ಲವನ್ನೂ ಸಚಿವರು ಬಗೆ ಹರಿಸುವುದಾಗಿ ಸಚಿವರು ಹೇಳಿದ್ದಾರೆ ಎಂದರು.
ಸಮಿತಿ ಸದಸ್ಯರಾದ ಎಚ್.ಡಿ. ರೇವಣ್ಣ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾದ ಈ ವಿಮಾನ ನಿಲ್ದಾಣ, ಜನರನ್ನು ಸುಲಿಗೆ ಮಾಡುತ್ತಿದೆಯೇ ಹೊರತು ಉತ್ತಮ ಸೇವೆ ಒದಗಿಸುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕೇಂದ್ರ ಸಚಿವರನ್ನು ಮನವಿ ಮಾಡಿಕೊಂಡೆವು. ಅವರು ಸಹಾನುಭೂತಿಯಿಂದ ಆಲಿಸಿ, ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದರು.
ಸಮಿತಿಯಲ್ಲಿ ಶಾಸಕರಾದ ಖಮರುಲ್ ಇಸ್ಲಾಂ, ಕೆ.ಸಿ. ಕೊಂಡಯ್ಯ, ಎಸ್.ಆರ್. ವಿಶ್ವನಾಥ್, ಎಚ್.ಸಿ. ಬಾಲಕೃಷ್ಣ, ನೆ.ಲ. ನರೇಂದ್ರಬಾಬು, ಎಂ. ಶ್ರೀನಿವಾಸ್, ಸಿ.ಎನ್. ಅಶ್ವತ್ಥನಾರಾಯಣ, ಎಂ.ವಿ. ನಾಗರಾಜ್, ಡಾ. ನಾಡಗೌಡ, ತೋಂಟದಾರ್ಯ, ಅಬ್ದುಲ್ ನಜೀಬ್ ಮುಂತಾದವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)