ಬಿಜೆಪಿಯ ನೂತನ ಸಂಸದರಿಗೆ ಅಡ್ವಾಣಿ ಪಾಠ
ಇಂದು ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಭಾಗವಹಿಸಿ ನೂತನವಾಗಿ ಆಯ್ಕೆಯಾಗಿರುವ 58 ಸಂಸದರಿಗೆ ಸಲಹೆ ಸೂಚನೆ ನೀಡಿದರು. ಬಿಜೆಪಿ ಪಕ್ಷ ಒಂದು ನಿರ್ಧಿಷ್ಟ ತತ್ವ, ಸಿದ್ಧಾಂತದ ಮೇಲೆ ನಿಂತಿದೆ. ಜನಪ್ರತಿನಿಧಿಗೆ ಸಮಾಜದಲ್ಲಿ ಉತ್ತಮ ಸ್ಥಾನವಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಮುಖ್ಯವಾಗಿ ಬಿಜೆಪಿ ಭ್ರಷ್ಟಚಾರವನ್ನು ಬಲವಾಗಿ ವಿರೋಧಿಸುತ್ತದೆ. ಈ ಹಿಂದಿನ ಇತಿಹಾಸ ನಿಮಗೆ ಗೊತ್ತಿದೆ ಎಂದು ಭಾವಿಸಿರುವೆ. ಇಂತಹ ಪ್ರಕರಣಗಳನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಸಂಸದರಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರು ಲಕ್ಷ್ಮಣ ಹಾಗೂ ದಿಲೀಪ್ ಸಿಂಗ್ ಜೂಡಿಯಾ ಅವರನ್ನು ಪಕ್ಷದಿಂದ ಹೊರಗಿರಿಸಲಾಗಿದೆ. ಈ ವರೆಗೂ ಕೂಡಾ ಪಕ್ಷ ಅವರಿಂದ ಅಂತರವನ್ನು ಕಾಪಾಡಿದೆ. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆ ಖಂಡಿತ. ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸಲದ ಮೂವರು ಸಂಸದರಿಗೆ ಈ ಸಲ ಪಕ್ಷ ಟಿಕೆಟ್ ನೀಡಿಲ್ಲ. ಈ ಎಲ್ಲ ಪ್ರಕರಣಗಳು ನಿಮಗೆ ಪಾಠವಾಗಬೇಕು ಎಂದು ಅಡ್ವಾಣಿ ಹೇಳಿದರು.
(ಏಜನ್ಸೀಸ್)