ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಧ್ವಜ ವಿವಾದ ಸುತ್ತೋಲೆ ವಾಪಸ್ಸಿಗೆ ಕ್ರಮ

By Staff
|
Google Oneindia Kannada News

Yeddyurappa
ಬೆಂಗಳೂರು, ಜೂ. 8 : ಕನ್ನಡ ರಾಜ್ಯೋತ್ಸವ ಸೇರಿದಂತೆ ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸಬಾರದು ಎಂಬ ಸರಕಾರಿ ಆದೇಶಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ತನ್ನ ಆದೇಶವನ್ನು ಹಿಂಗೆದುಕೊಳ್ಳಲು ನಿರ್ಧರಿಸಿದೆ. ಕನ್ನಡ ವಿರೋಧಿ ಆದೇಶ ಹೊರಡಿಸಿರುವ ಸರಕಾರ 24 ಗಂಟೆಯೊಳಗೆ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸಬಾರದು ಎಂಬ ಸುತ್ತೋಲೆಯನ್ನು ನಾವು ಹೊರಡಿಸಿದ್ದಲ್ಲ. ಈ ಹಿಂದೆಯೇ ಅದನ್ನು ಹೊರಡಿಸಲಾಗಿತ್ತು. ಈ ಸುತ್ತೋಲೆಯಿಂದ ಕನ್ನಡಿಗರಿಗೆ ಅವಮಾನ ಆಗಲಿದೆ ಅನ್ನುವುದಾದರೆ, ಈ ಕೂಡಲೇ ಸುತ್ತೋಲೆಯನ್ನು ವಾಪಸ್ಸು ಪಡೆಯಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸತೊಡಗಿದ್ದವು. ಕನ್ನಡಿಗರ ಸ್ವಾಭಿಮಾನ ಸಂಕೇತವಾಗಿರುವ ಕನ್ನಡ ಧ್ವಜ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರಿಸದಂತೆ ಶನಿವಾರ ಕರ್ನಾಟಕ ಸರಕಾರ ಹೊರಡಿಸಿತ್ತು. ಸರಕಾರ ಹೊರಡಿಸಿರುವ ಕನ್ನಡ ವಿರೋಧಿ ಆದೇಶವನ್ನು 24 ಗಂಟೆಯಲ್ಲಿ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರಕಾರವೇ ಹೊಣೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದರು.

2002 ರ ಧ್ವಜ ಸಂಹಿತೆ ಕಾಯ್ದೆ ಪ್ರಕಾರ, ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ, ಸಮನಾಗಿ, ಅಥವಾ ರಾಷ್ಟ್ರ ಧ್ವಜಕ್ಕಿಂತ ದೊಡ್ಡದಾದ ಯಾವುದೇ ಧ್ವಜವನ್ನು ಹಾರಿಸಬಾರದು. ಆದರೆ, ರಾಷ್ಟ್ರ ಧ್ವಜಕ್ಕಿಂತ ಕೆಳಗೆ ಹಾರಿಸುವಂತಿಲ್ಲ ಎಂದು ಈ ನಿಯಮ ಹೇಳುವುದಿಲ್ಲ. ಸುತ್ತೋಲೆಯಲ್ಲಿ ರಾಜ್ಯೋತ್ಸವ ಎಂಬುದನ್ನು ಉಲ್ಲೇಖಿಸುವ ಅಗತ್ಯವೂ ಇರಲಿಲ್ಲ. 2002 ರ ನಂತರ ಕಾಯ್ದೆಗೆ ತಿದ್ದುಪಡಿಯಾಗಿದೆಯೇ ಎಂಬ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಜೂನ್ 8ರ ವರೆಗೆ ಸಮಯಾವಕಾಶ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X