ಜೂ.11ಕ್ಕೆ ಸತ್ಯಂ ಸಭೆ. 5000 ಪಿಂಕ್ ಸ್ಲಿಪ್ ರೆಡಿ
ನವದೆಹಲಿ, ಜೂ. 5 : ಹಗರಣ ಪೀಡಿತ ಸತ್ಯಂ ಕಂಪ್ಯೂಟರ್ಸ್ ಕಂಪನಿಯ ಹಳೆಯ ಪೂರ್ಣ ಪ್ರಮಾಣದ ಅಡಳಿತ ಮಂಡಳಿ ಜೂನ್ 11 ರಂದು ಅಂತಿಮ ಸಭೆ ನಡೆಸಲಿದೆ. ಅಂದೇ ಕಂಪನಿಯ ನೂತನ ಒಡೆಯ ಟೆಕ್ ಮಹಿಂದ್ರ ಕಂಪನಿಯ ಅಧಿಕೃತವಾಗಿ ಸತ್ಯಂ ಕಂಪನಿಯ ಸಂಪೂರ್ಣ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದ್ದು, ಸುಮಾರು 5000 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಗುರುವಾರ ಇಲ್ಲವೇ ಶುಕ್ರವಾರ ಸತ್ಯಂ ಪೂರ್ಣ ಪ್ರಮಾಣದ ಸಭೆ ಕರೆದಿದೆ. ಅದರಲ್ಲಿ 6 ಮಂದಿ ಸರಕಾರ ನೇಮಕ ಮಾಡಿದ ಸದಸ್ಯರಾದರೆ, ಉಳಿದ ನಾಲ್ಕು ಮಂದಿ ಟೆಕ್ ಮಹೀಂದ್ರ ಕಂಪನಿಗೆ ಸೇರಿದ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವರು. ಕಂಪನಿಯ ಮುಂದಿನ ವ್ಯವಹಾರಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ. ಕಂಪನಿಯ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ.
ಅಲ್ಲದೇ ಆರ್ಥಿಕ ಹಿಂಜರಿತ ಹಣಕಾಸು ಸ್ಥಿತಿಗತಿಯ ಮೇಲೆ ಗಾಢವಾದ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಕಂಪನಿಯ ಸುಮಾರು 5 ರಿಂದ 10,000 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವ ಸಾಧ್ಯತೆಗಳಿವೆ ಎಂದು ಸತ್ಯಂ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಸತ್ಯಂ ಕಂಪನಿಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ಉದ್ಯೋಗಿಗಳನ್ನು ಕೈಬಿಡಲಾಗುವುದು ಎಂದು ಇತ್ತೀಚೆಗೆ ಟೆಕ್ ಮಹೀಂದ್ರ ಕಂಪನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿನೀತ್ ನಾಯರ್ ಹೇಳಿದ್ದರು.
(ಏಜನ್ಸೀಸ್)