ಕವಿತಾ ಕೊಲೆ ಪ್ರಕರಣ : ಕೊಲೆಗಾರನ ಬಂಧನ
ಶಿವಮೊಗ್ಗ, ಜೂ. 5 : ಕಳೆದ ಹಲವು ದಿನಗಳ ಹಿಂದೆ ಯುವತಿಯೊರ್ವಳನ್ನು ಕರೆತಂದು ಅತ್ಯಾಚಾರ ಮಾಡಿ ನಂತರ ಕೊಲೆಗೈದು ಕಲ್ಲು ಕೋರೆಯಲ್ಲಿ ಎಸೆದು ಹೋಗಿದ್ದ ಕೊಲೆಗಾರನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿಕಾರಿಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ಸತೀಶ್(31) ಎಂದು ಗುರುತಿಸಲಾಗಿದೆ. ಈತ ಇದೇ ತಾಲೂಕಿನ ಭದ್ರಾಪುರ ಗ್ರಾಮದ ಕವಿತಾ(20)ಎಂಬಾಕೆಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ ಮತ್ತು ಅವಳೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.
ಮೇ 21ರಂದು ಕಲ್ಲು ಗಂಗೂರಿನ ಗೆಳೆಯ ರಾಜು ಎಂಬಾತನ ಮನೆಗೆ ಕವಿತಾಳನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ತಂಬಾಕು ಗೋಡೌನ್ ಎದುರಿನ ಕಲ್ಲು ಕ್ವಾರಿಗೆ ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸತೀಶ್ ಈಗ ಪೊಲೀಸರ ವಶದಲ್ಲಿದ್ದು, ಈ ಕೃತ್ಯಕ್ಕೆ ಮೊತ್ತೊಬ್ಬನನ್ನು ಬಳಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯಿಂದ ಅದು ತಿಳಿಯಬೇಕಿದೆ. ಮತ್ತೆ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಲಿಂಗಪ್ಪ, ಪಿಎಸ್.ಐ.ಕೇಶವಮೂರ್ತಿ ತನಿಖೆ ಕೈಗೊಂಡಿದ್ದಾರೆ.
50 ಸಾವಿರ ಮೌಲ್ಯದ ವಾಚ್ ಕಳವು
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಸುಶೀಲ ಹಾಗೂ ಗೋಪಾಲ್ ದಂಪತಿಗಳಿಗೆ ಸೇರಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಗೋಲ್ಡ್ ಕೇಸ್ ವಾಚ್ ಕಳ್ಳತನವಾದ ಘಟನೆ ಗುರುವಾರ ಸನ್ಮಾನ್ ಲಾಡ್ಜ್ನಲ್ಲಿ ನಡೆದಿದೆ.
ಈ ದಂಪತಿಗಳು ನಗರದ ಗಾರ್ಡನ್ ಏರಿಯಾದ 3ನೇ ತಿರುವಿನಲ್ಲಿರುವ ಸನ್ಮಾನ್ ಲಾಡ್ಜ್ನ ರೂಂ.49ನ್ನು ಬಾಡಿಗೆಗೆ ಪಡೆದಿದ್ದರು. ಇಂದು ಬೆಳಿಗ್ಗೆ ಅವರ 50 ಸಾವಿರ ಮೌಲ್ಯದ ವಾಚ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.