ಕಿಡ್ಝೀ ಶಾಲೆ ಮುಖ್ಯ ಶಿಕ್ಷಕಿ ಹಣದೊಂದಿಗೆ ಪರಾರಿ
ಬೆಂಗಳೂರು, ಜೂ. 4 : ಝೀ ಟೆಲಿವಿಷನ್ ನೆಟ್ ವರ್ಕ್ ಲಿಮಿಟೆಡ್ ಸಹಯೋಗದಲ್ಲಿ ನಗರದ ಗಿರಿನಗರದಲ್ಲಿ ನಡೆಸಲಾಗುತ್ತಿರುವ ಕಿಡ್ಝೀ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕಾಗಿ ನೀಡಿದ್ದ ಹಣವನ್ನು ತೆಗೆದುಕೊಂಡು ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ. ನಮಿತಾ ಜೈನ್ ಎಂಬ ಮುಖ್ಯಶಿಕ್ಷಕಿಯೇ ಮಕ್ಕಳ ಫೀ ಎತ್ತಿಕೊಂಡು ಪರಾರಿಯಾಗಿರುವವರು.
ಘಟನೆ ತಿಳಿಯುತ್ತಿದ್ದಂತೆಯೇ ಮಕ್ಕಳ ಪೋಷಕರು ಗಿರಿನಗರದ ಕಿಡ್ಝೀ ಶಾಲೆಯ ಹತ್ತಿರ ಜಮಾಯಿಸಿದ್ದು, ಮಕ್ಕಳಿಗೆ ಆಗಿರುವ ಅನ್ಯಾಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಶಿಕ್ಷಕಿ ನಮಿತಾ ಜೈನ್ ಎಂಬುವವರು ಮಕ್ಕಳ ಶಾಲಾ ಪ್ರವೇಶಕ್ಕೆ ನೀಡಿದ ಸುಮಾರು 30 ಸಾವಿರ ರುಪಾಯಿ ಹಣವನ್ನು ಎತ್ತಿಕೊಂಡು ಪರಾರಿಯಾಗಿರುವುದು ಉಳಿದ ಸಿಬ್ಬಂದಿಗೆ ತೀವ್ರ ಸಮಸ್ಯೆಗೆ ಕಾರಣವಾಗಿದೆ.
ಅಲ್ಲದೇ, ಕಿಡ್ಝೀ ಶಾಲೆ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ಝೀ ಟೆಲಿವಿಷನ್ ನೆಟ್ ವರ್ಕ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ ಎಂಬ ಕಾರಣದಿಂದ ಪೋಷಕರು ಗಿರಿನಗರದ ಕಿಡ್ಝೀ ಶಾಲೆಗೆ ಮಕ್ಕಳನ್ನು ಸೇರಿಸಲು ಮುಂದಾಗಿದ್ದರು. ಆದರೆ, ಇದೀಗ ಕಿಡ್ಝೀ ಶಾಲೆಯಿಂದ ಪಂಗನಾಮ ಹಾಕಿಸಿಕೊಂಡಿರುವ ಪೋಷಕರು ನ್ಯಾಯಕ್ಕಾಗಿ ನಗರದ ಎಂ ಜಿ ರಸ್ತೆಯಲ್ಲಿರುವ ಝೀ ಟಿವಿ ಮುಖ್ಯಕಚೇರಿಗೆ ತೆರಳಿ ಆಡಳಿತ ಮುಖ್ಯಸ್ಥರಿಗೆ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಆದರೆ, ಝೀ ಆಡಳಿತ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕಾನೂನು ರೀತಿಯಲ್ಲಿ ನೋಟಿಸ್ ನೀಡಲಾಗಿದ್ದು, ನಮ್ಮ ಸಂಸ್ಥೆಗೂ ಗಿರಿನಗರದ ಕಿಡ್ಝಿ ಶಾಲೆಗೂ ಯಾವುದೇ ಸಂಬಂಧವಿಲ್ಲ ಎಂದು ಝೀ ಆಡಳಿತ ಮಂಡಳಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಮೋಸಹೋಗಿರುವ ಮಕ್ಕಳ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)