ನಮ್ಮ ನಾಯಕ ಸಿದ್ದರಾಮಯ್ಯ: ವರ್ತೂರು ಪ್ರಕಾಶ್
ಹೊಸಪೇಟೆ, ಜೂ.3:ಬಿಜೆಪಿ ಜತೆಗಿದ್ದರೂ ನನ್ನ ನಾಯಕ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಶಾಸಕ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಅನಂತಶಯನ ಗುಂಡಿ ಗ್ರಾಮದಲ್ಲಿ ಹಕ್ಕ ಬುಕ್ಕ ಯುವಕ ಸಂಘ ಹಮ್ಮಿಕೊಂಡಿದ್ದ ಹೊಸಪೇಟೆ ತಾಲೂಕು ವರ್ತೂರು ಪ್ರಕಾಶ್ ಯುವಸೇನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುರುಬ ಸಮುದಾಯದ ಉತ್ತಮ ನಾಯಕ ಸಿದ್ದರಾಮಯ್ಯ. ಅವರ ನೇತೃತ್ವದಲ್ಲಿ ಕುರುಬರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅವರ ನಾಯಕತ್ವ, ಹೋರಾಟದ ಗುಣಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕ ಎಂದರು.
ಒಂದು ಕುರಿ ಮುಂದೆ ಸಾಗಿದರೆ ಅದರ ಹಿಂದೆ ಎಲ್ಲ ಕುರಿಗಳು ಹೋಗುತ್ತವೆ. ಅದರಂತೆಯೇ ನಾವು ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತೇವೆ. ಯಾವತ್ತಿಗೂ ನಮ್ಮ ನಾಯಕ ಸಿದ್ದರಾಮಯ್ಯನವರೇ ಹೊರತು ಯಡಿಯೂರಪ್ಪ ಅಲ್ಲ. ಇದುವರೆಗೂ ರಾಜ್ಯವನ್ನು ಮುಂದುವರಿದ ಜನಾಂಗದವರು ಮುನ್ನೆಡೆಸಿದ್ದಾರೆ. ಹಾಗಾಗಿ ಹಿಂದುಳಿದ ಜನಾಂಗಕ್ಕೆ ಸಾಮಾಜಿಕ ನ್ಯಾಯ ದೂರವಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)