ಶಿವಮೊಗ್ಗದಲ್ಲಿ ನಕ್ಸಲ್ ದಂಪತಿ ಬಂಧನ; ಶಸ್ತ್ರಾಸ್ತ್ರ ವಶ
ಶಿವಮೊಗ್ಗ, ಜೂ.1: ಆಗುಂಬೆ ಬಳಿ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಗಳನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ಬಂಧನಕ್ಕೊಳಗಾಗಿರುವ ನಕ್ಸಲ್ ದಂಪತಿಗಳು ವಿಚಾರಣೆ ವೇಳೆ ಶಸ್ತ್ರಾಸ್ತ್ರಗಳನ್ನು ಅಡಗಿಸಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಈ ಕುರಿತು ಡಿಜಿಪಿ ಅಜಯ್ ಕುಮಾರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಂಧಿತ ನಕ್ಸಲ್ ದಂಪತಿಗಳು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಬಹಳಷ್ಟು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಬೇಕಾಗಿದ್ದರು. ವಿಚಾರಣೆ ವೇಳೆ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಬಗ್ಗೆ ಇವರು ಬಾಯ್ಬಿಟ್ಟರು ಎಂದು ಅವರು ತಿಳಿಸಿದರು.
ಐದು ಬಂದೂಕುಗಳು ಸೇರಿದಂತೆ ಎರಡು ಕಾರ್ಬೈನ್ ಗಳು, ಒಂದು ಪಿಸ್ತೂಲು ಮತ್ತು ರೈಫಲ್ ಗಳು, 83 ಜಿಲಾಟಿನ್ ಸ್ಟಿಕ್ ಗಳು, 200 ಡಿಟೋನೇಟರ್ ಗಳು ಹಾಗೂ ಮಾವೋವಾದಿ ಸಾಹಿತ್ಯ ವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದಂಪತಿಗಳನ್ನು ಸುರೇಶ್ ನಾಯಕ್ ಮತ್ತು ಹೊರಳೆ ಸರೋಜ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಇವರು ಸಿಪಿಐ(ಎಂ) ಸಂಘಟನೆ ಸೇರಿದ್ದರು. ಇವರ ತಲೆಗೆ ರು.5 ಮತ್ತು ರು.2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಎಂಟು ಪ್ರಕರಣಗಳಿಗೆ ಸರೋಜ ಬೇಕಾಗಿದ್ದರು. ಸುರೇಶ್ ಎರಡು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)