ಅಧಿವೇಶನದ ತನಕ ಕಾಯಿರಿ: ಯಡಿಯೂರಪ್ಪ
ರಾಯಚೂರು, ಮೇ.27 : ರಾಜ್ಯ ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆ ಬಗ್ಗೆ ಶ್ವೇತಪತ್ರ ಕೇಳುವ ವಿರೋಧ ಪಕ್ಷಗಳಿಗೆ ಸದ್ಯದಲ್ಲೇ ನಡೆಯುವ ಅಧಿವೇಶನದಲ್ಲಿ ಉತ್ತರ ನೀಡಲಿದ್ದೇನೆ. ಅಲ್ಲಿಯ ತನಕ ತಾಳ್ಮೆಯಿಂದ ಕಾಯಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಕ್ಷ ನಾಯಕರುಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಶಕ್ತಿನಗರದಲ್ಲಿ ರಾಯಚೂರು ಸೂಪರ್ ಕ್ರಿಟಿಕಲ್ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಮುಖ್ಯಮ೦ತ್ರಿ, ರಾಜ್ಯ ಸರಕಾರದ ಸಾಧನೆ ಏನೆ೦ದು ಜನರಿಗೆ ಸ೦ಪೂರ್ಣ ಅರಿವಿದೆ. ಅದಕ್ಕೆ ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದರು. ಚುನಾವಣೆ ಹಿನ್ನಲೆಯಲ್ಲಿ ಎರಡು ತಿಂಗಳು ಅಭಿವೃದ್ದಿಯತ್ತ ಗಮನ ನೀಡಲು ಸಾಧ್ಯವಾಗಲಿಲ್ಲ. ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ರಾಜ್ಯದ ಅಭಿವೃದ್ದಿಯತ್ತ ಗಮನ ನೀಡುತ್ತೇವೆ. ಸರಕಾರ ಒಂದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ಸರಕಾರದ ಸಾಧನೆಗಳ ವಸ್ತು ಪ್ರದರ್ಶನ ಬೃಹತ್ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)