ಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?
ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ದೆಹಲಿಯಲ್ಲಿ ಸಚಿವ ಸ್ಥಾನ ಪಡೆಯಲು ಹರ ಸಾಹಸ ಪಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಅಪರವೇಳೆಯಲ್ಲಿ ಸೋನಿಯಾ ಜತೆ ಮಾತುಕತೆ ನಡೆಸಿ ಹೊರಬಂದು ಸುದ್ದಿಗ್ರಾಸವಾಗಿ ಅತ್ತ ಕೇಂದ್ರ ಸಚಿವ ಸ್ಥಾನ ಸಿಗದೇ ಹತಾಶರಾದ ಕುಮಾರ, ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂಬ ಸುದ್ದಿ ಹರಡಿತ್ತು. ಆದರೆ ಆ ವಿಷಯವನ್ನು ಅಲ್ಲಗಳೆದ ಅವರ ಅನುಯಾಯಿ ಚೆಲುವರಾಯಸ್ವಾಮಿ, ಎಂಪಿ ಅಥವಾ ಎಂಎಲ್ ಎ ಎರಡಲ್ಲಿ ಯಾವ ಸ್ಥಾನದಲ್ಲಿ ಮುಂದುವರೆಯತ್ತಾರೆ ಎಂಬುದು ಸದ್ಯದಲ್ಲೇ ತಿಳಿಯುತ್ತದೆ ಎಂದಷ್ಟೇ ಹೇಳಿದ್ದರು.
ರಾಮನಗರ ಕ್ಷೇತ್ರದ ಸುಮಾರು ಅರ್ಧದಷ್ಟು ಭಾಗ ಹಳೆ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಕ್ಷೇತ್ರದಲ್ಲಿ ಸಿಂಧ್ಯಾ ಚಿರಪರಿಚಿತರಾಗಿರುವ ಕಾರಣ, ಅವರ ಅಭ್ಯರ್ಥಿ ಸ್ಥಾನ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಅನಾರೋಗ್ಯ ಪೀಡಿತರಾಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿರುವ ಸಿಂಧ್ಯಾ, "ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚಿಸಿಲ್ಲ. ಕಾಂಗ್ರೆಸ್ ಮುಖಂಡರೊಡನೆ ಕೂಡ ಸಂಪರ್ಕದಲ್ಲಿದ್ದೇನೆ ಆದರೆ ಯಾವುದೇ ಪಕ್ಷವನ್ನು ಸೇರುವ ತರಾತುರಿ ಇಲ್ಲ" ಎಂದು ಸಿಂಧ್ಯಾ ಹೇಳಿದ್ದಾರೆ.
(ದಟ್ಸ್ ಕನ್ನಡವಾರ್ತೆ)