ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಬಂಡಾಯ ?
ಬೆಂಗಳೂರು, ಮೇ. 21 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತ್ರಿವಿಕ್ರಮ ಬಾರಿಸಿ ಪಕ್ಷ ಸಂಭ್ರಮ ಪಡುತ್ತಿದ್ದರೆ, ಖಾತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿದ್ಯುತ್ ಸಚಿವ ಕೆ ಎಸ್ ಈಶ್ವರಪ್ಪ ನಡುವೆ ಭಿನ್ನಮತ ಸ್ಫೊಟಗೊಳ್ಳುವ ಸಾಧ್ಯತೆಗಳಿವೆ.
ಚುನಾವಣೆ ಫಲಿತಾಂಶದ ನಂತರ ಈಶ್ವರಪ್ಪ ಅವರ ಖಾತೆಯನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿಯೇ ಈಶ್ವರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆ ಮುಗಿಯಲಿ, ಪಕ್ಷದೊಳಗೇ ಆಪರೇಷನ್ ನಡೆಯುತ್ತದೆ. ಇದಕ್ಕ ಮೊದಲ ಬಲಿ ಈಶ್ವರಪ್ಪ ಆಗುತ್ತಾರೆ. ಅವರಿಗೆ ಕಾರ್ಮಿಕ ಖಾತೆಯನ್ನು ನೀಡಲಾಗುತ್ತದೆ ಎನ್ನುವ ಸುದ್ದಿಯಿಂದ ಈಶ್ವರಪ್ಪ ಗರಂ ಆಗಿದ್ದಾರೆ.
ಶಿವಮೊಗ್ಗದಲ್ಲಿ ಸಿಎಂ ಪುತ್ರ ರಾಘವೇಂದ್ರ ಗೆಲುವಿನ ಸಂಭ್ರಮವನ್ನು ಜಿಲ್ಲೆಯ ಸಚಿವರು, ಶಾಸಕರು, ಮುಖಂಡರು ಆಚರಿಸುತ್ತಿದ್ದರೆ, ಅತ್ತ ಪ್ರಭಾವಿ ನಾಯಕ ಈಶ್ವರಪ್ಪ ದೂರ ಉಳಿದಿದ್ದರು. ಮತಎಣಿಕೆ ದಿನ ಪಕ್ಷದ ಅಭ್ಯರ್ಥಿ ಗೆಲುವಿನ ಕಡೆಗೆ ಬರುತ್ತಿದ್ದಂತೆಯೇ ಜಿಲ್ಲೆಯ ನಾನಾ ಕಡೆ ಮೊಕ್ಕಾಂ ಹೂಡಿದ್ದ ಸಚಿವ ಹಾಲಪ್ಪ ಹಾಗೂ ಇತರ ಶಾಸಕರು ಮತಎಣಿಕೆ ಕೇಂದ್ರಕ್ಕೆ ಧಾವಿಸಿದ್ದರು.
ಬೆಂಗಳೂರಿನಲ್ಲದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿ ಗೆಲುವಿನ ಸಂಭ್ರಮದಲ್ಲಿ ಭಾಗವಹಿಸಿದ್ದರು. ಆದರೆ, ನಗರದಲ್ಲೇ ಇದ್ದ ಈಶ್ವರಪ್ಪ ಎಣಿಕೆ ಕೇಂದ್ರಕ್ಕೆ ಬರುವುದಿರಲಿ, ಪಕ್ಷದ ಕಚೇರಿಗೂ ಬಂದಿಲ್ಲ. ಗೆದ್ದಿರುವ ರಾಘವೇಂದ್ರ ಅವರನ್ನು ಅಭಿನಂದಿಸುವ ಉತ್ಸಾಹವನ್ನು ತೋರಿಲ್ಲ. ಇದು ಯಡಿಯೂರಪ್ಪ ಅವರ ಅಸಮಾದಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಹಾದಿ ಅಷ್ಟೇನೂ ಸುಗಮವಲ್ಲ ಎನ್ನುವು ಸುಳಿವನ್ನು ಈಶ್ವರಪ್ಪ ಗಪ್ ಚುಪ್ ಮೂಲಕ ತೋರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)