ಮುಂದಿನ ಐದು ವರ್ಷ ಸೋನಿಯಾ ಕೈಯಲ್ಲಿ ಭಾರತ
ಯುಪಿಎ ಒಕ್ಕೂಟವು ಮನಮೋಹನ್ ಸಿಂಗ್ ಅವರನ್ನೇ ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡುವುದಾಗಿ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುವ ಸುಯೋಗ ಜವಾಹರ್ ಲಾಲ್ ನೆಹರು ನಂತರ ಮನಮೋಹನ್ ಸಿಂಗ್ ಅವರಿಗೆ ಒದಗಿಬಂದಿದೆ. ಯುಪಿಎ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿರುವ ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎನ್ನುವುದು ವಿಶೇಷವಾಗಿದೆ. ಸದ್ಯ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನೂತನ ಸರಕಾರದ ಚುಕ್ಕಾಣಿಯನ್ನು ಮನಮೋಹನ್ ಸಿಂಗ್ ಹಿಡಿಯಲಿದ್ದಾರೆ. ಅವರ ಕೈಯಲ್ಲಿ ದೇಶ ಮತ್ತು ಸರಕಾರ ಸುಭದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿ ರಾಜ್ಯಗಳು ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಕಾಂಗ್ರೆಸ್ ಅಂಗ ಪಕ್ಷಗಳು ಕೂಡಾ ತಮ್ಮ ಸಾಮರ್ಥ್ಯಕ್ಕಿಂತ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಯುಪಿಎ ಒಕ್ಕೂಟ ತಮ್ಮ ಲೆಕ್ಕಾಚಾರಕ್ಕಿಂತ ಹೆಚ್ಚು ಸ್ಥಾನ ಪಡೆದು ದಿಲ್ಲಿಯಲ್ಲಿ ಮತ್ತೆ ಕೈ ಧ್ವಜವನ್ನು ಹಾರಿಸಲು ಮುಂದಾಗಿವೆ.
ದೇಶದ ಪ್ರಜ್ಞಾವಂತರ ಕ್ಷೇತ್ರಗಳು ಎಂದೇ ಹೆಸರಾಗಿರುವ ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ ಭಾರಿ ಮುಖಭಂಗ ಎಂದೇ ಕರೆಯಲಾಗಿದೆ. ಇರುವ ಏಳು ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಜಯಗಳಿಸಲು ಸಾಧ್ಯವಾಗದಿರುವುದು ಅಡ್ವಾಣಿ ಅವರ ಸಾಮರ್ಥ್ಯವನ್ನು ಕೆಣಕುವಂತಾಗಿದೆ. ದುರ್ಬಲ ಪ್ರಧಾನಿ, ಸ್ವೀಸ್ ಬ್ಯಾಂಕ್ ಪ್ರಕರಣ, ಸೋನಿಯಾ ವಿದೇಶಿ ಮೂಲ ಬಿಜೆಪಿ ಸೋಲಿಗೆ ಇವು ಕೂಡಾ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಈ ಚುನಾವಣೆಯಲ್ಲಿ ಮತ್ತೆ ಸೋಲು ಕಂಡಿದೆ. ಕರ್ನಾಟಕ, ಮಧ್ಯಪ್ರದೇಶ, ಗುಜರಾತ ಹೊರತುಪಡಿಸಿ ಬಿಜೆಪಿ ಪ್ರದರ್ಶನ ಎಲ್ಲ ರಾಜ್ಯಗಳಲ್ಲೂ ನೀರಸವಾಗಿದೆ. ಇದರ ಅಂಗಪಕ್ಷಗಳ ಪರಿಸ್ಥಿತಿಯೂ ಬೇರೇನು ಇಲ್ಲ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ರಾಜ್ಯಗಳು ಬಿಜೆಪಿಗೆ ಭಾರಿ ಹೊಡೆತ ನೀಡಿವೆ. ಅನೇಕ ಪ್ರಮುಖ ವಾಹಿನಿಗಳು, ಪತ್ರಿಕೆಗಳು ಮಾಡಿದ ಸಮೀಕ್ಷೆಗಳು ಕೈಕೊಟ್ಟಿವೆ. ಬಿಜೆಪಿ ಸೋಲು ಆ ಪಕ್ಷಗಳ ನಾಯಕರನ್ನು ದೃತಿಗೆಡಿಸಿದೆ. ಎನ್ ಡಿ ಎ ಸೋತರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಅಡ್ವಾಣಿ ಹೇಳಿದ್ದರು. ಮಾತಿಗೆ ತಪ್ಪದ ಅವರು, ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ.
ಬಿಹಾರದಲ್ಲಿ ಲಾಲು ದಯನೀಯವಾಗಿ ಸೋತರೆ, ನಿತೀಶ್ ಕುಮಾರ್ ಅವರು ಮತ್ತೆ ಭರ್ಜರಿ ಜಯಗಳಿಸಿದ್ದಾರೆ. ತೃತೀಯರಂಗ ಕೂಡ ಭಾರಿ ಮುಖಭಂಗ ಅನುಭವಿಸಿದೆ. ಕಳೆದ 60 ಸ್ಥಾನ ಪಡೆದಿದ್ದ ಎಡಪಕ್ಷಗಳ ಈ ಸಲ ಕೇವಲ 30 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆಂಧ್ರಪ್ರದೇಶದಲ್ಲಿ ವಿಧಾನಸಭೆಯಲ್ಲಿ ಕೂಡಾ ಕಾಂಗ್ರೆಸ್ ಪಕ್ಷದ ಪಾಲಾಗುವ ಸಾಧ್ಯತೆಗಳಿವೆ.
ರಾಹುಲ್ ಗಾಂಧಿ ಅವರ ಶ್ರಮದಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿದೆ. ದಿಲ್ಲಿ ಮೇಲೆ ಕಣ್ಣಿಟ್ಟಿದ್ದ ಮಾಯಾವತಿಯ ಬಿಎಸ್ಪಿಗೆ, ಒಳಜಗಳಗಳಿಂದ ಗೊಂದಲ ಗೂಡಾಗಿದ್ದ ಸಮಾಜವಾದಿ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಒಟ್ಟಿನಲ್ಲಿ ದೆಹಲಿಯ ಗದ್ದುಗೆ ಏರಲು ಕಾಂಗ್ರೆಸ್ ಮತ್ತೆ ಸಕಲ ಸಿದ್ದತೆಯಲ್ಲಿ ತೊಡಗಿದೆ. 250 ಕ್ಕೂ ಹೆಚ್ಚು ಸ್ಥಾನ ಗಳಿಸಿರುವ ಯುಪಿಎ ಯಾವ ಪಕ್ಷಗಳ ಹಂಗೂ ಇಲ್ಲ. ಪ್ರಾದೇಶಿಕ ಪಕ್ಷಗಳ ಮುಂದೆ ಕೈಯೊಡ್ಡುವ ದರ್ದು ಇಲ್ಲ. ಯುಪಿಎಗೆ ಬೆಂಬಲ ನೀಡಲು ಎಲ್ಲರೂ ಮುಂದೆ ಬರುವ ಲಕ್ಷಣವಿದೆ. ಪಕ್ಷೇತರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮನಮೋಹನ್ ಸಿಂಗ್ ಕೈಯಲ್ಲಿ ಭದ್ರವಾಗಿರುತ್ತದೆ. ಸೋನಿಯಾ ಗಾಂಧಿ ಅವರ ರಿಮೋಟ್ ಕಂಟ್ರೋಲ್ ನಲ್ಲಿ.
(ದಟ್ಸ್ ಕನ್ನಡ ವಾರ್ತೆ)
ರಾಹುಲ್
ಅಲ್ಲ
ಸಿಂಗ್
ಅವರೇ
ಪ್ರಧಾನಿ
:
ಸೋನಿಯಾ
ಪ್ರಧಾನಿಯಾಗಿ
ಮನಮೋಹನ್
ಮುಂದುವರಿಕೆ:
ಕಾಂಗ್ರೆಸ್
ಮಹಾಚುನಾವಣೆ
2009
ಫಲಿತಾಂಶ
:
ಕ್ಷಣಕ್ಷಣದ
ಸುದ್ದಿ