ಜನಜಾಗೃತಿಗೆ ಇಂಟರ್ನೆಟ್ ಬಸ್ ಪ್ರವಾಸ
ಬೆಂಗಳೂರು, ಮೇ. 14 : ಅಂತರ್ಜಾಲಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕರ್ನಾಟಕದ 15 ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ಬಸ್ ಕಾರ್ಯಕ್ರಮವನ್ನು ಗೂಗಲ್ ಇಂಡಿಯಾ ಆಯೋಜಿಸಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಗೂಗಲ್ ಇಂಡಿಯಾದ ಮುಖ್ಯಸ್ಥ ರಾಮಪ್ರಸಾದ್, ಇಂಟರ್ನೆಟ್ ಬಳಿಕೆ, ಅದರ ಉಪಯೋಗ, ಇದರಿಂದ ಆಗುವ ಪ್ರಯೋಜನೆ ಸೇರಿದಂತೆ ಅನೇಕ ಮಾಹಿತಿಗಳನ್ನು ಸಾಮಾನ್ಯರಿಗೂ ತಲುಪಿಸುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕದ ಒಟ್ಟು 15 ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ಬಸ್ ಸಂಚಾರಿಸಲಿದ್ದು, ಸುಮಾರು 50 ದಿನಗಳ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ.
ಇಂಟರ್ನೆಟ್ ಬಸ್ ಕಾರ್ಯಕ್ರಮ ನಾಲ್ಕು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಮಾಹಿತಿ ತಂತ್ರಜ್ಞಾನ, ಸಂವಹನ ಕಲೆ, ಮನರಂಜನೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಂಟರ್ನೆಟ್ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಲಿದೆ ಎನ್ನುವುದನ್ನು ತಿಳಿಸುವುದು ಈ ಕಾರ್ಯಕ್ರಮದ ಮುಖ್ಯಉದ್ದೇಶವಾಗಿದೆ. ಸರ್ಚಿಂಗ್, ಇಮೇಲ್, ಸೋಶಿಯಲ್ ನೆಟ್ ವರ್ಕಿಂಗ್, ಆನ್ ಲೈನ್ ಮ್ಯಾಪ್ಸ್ ಈ ಎಲ್ಲ ವಿಷಯಗಳು ಗೂಗಲ್ ನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಲಭ್ಯವಿದೆ. ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡಲಾಗುವುದು ರಾಮಪ್ರಸಾದ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)