ಎನ್ಎಸ್ಎ ತೆರವು : ಸುಪ್ರಿಂಕೋರ್ಟ್ ಗೆ ಮಾಯಾ
ಅಲಹಾಬಾದ್ ಹೈಕೋರ್ಟ್ ನೇಮಿಸಿರುವ ಸಲಹಾ ಮಂಡಳಿ ತೆಗೆದುಕೊಂಡಿರುವ ತೀರ್ಮಾನ ನ್ಯಾಯ ಸಮ್ಮತವಲ್ಲ. ವರುಣ್ ಗಾಂಧಿ ಚುನಾವಣೆ ಪ್ರಚಾರ ವೇಳೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಅಷ್ಟೂ ಸಾಕ್ಷ್ಯಾಧಾರಗಳನ್ನು ನ್ಯಾಯ ಮಂಡಳಿಗೆ ಒದಗಿಸಲಾಗಿತ್ತು. ಆದರೂ ಕೂಡಾ ಮಂಡಳಿ ವರುಣ್ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರಿಂಕೋರ್ಟ್ ಗೆ ಮಾಯಾವತಿ ಸರಕಾರ ವಿವರಿಸಿದೆ.
ಕಳೆದ ಮಾರ್ಚ್ 7 ರಂದು ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವರುಣ್ ಗಾಂಧಿ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಸರಕಾರ ವರುಣ್ ಅವರನ್ನು ಎನ್ ಎಸ್ಎ ಕಾಯ್ದೆಯಡಿ ಬಂಧಿಸಿತ್ತು. ನಂತರ ವರುಣ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೆರೋಲ್ ಮೂಲಕ 15 ದಿನಗಳ ಕಾಲ ನ್ಯಾಯಾಲಯ ವರುಣ್ ಅವರನ್ನು ಬಿಡುಗಡೆಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿಶೇಷ ಸಲಹಾ ಮಂಡಳಿ ರಚಿಸಿತ್ತು. ಏಪ್ರಿಲ್ 28 ರಂದು ಮಂಡಳಿ ಮುಂದೆ ಹಾಜರಾದ ವರುಣ್, ಪ್ರಕರಣ ಕುರಿತು ಸಂಪೂರ್ಣ ವಿವರಣೆ ನೀಡಿದ್ದರು. ನಂತರ ಮಂಡಳಿ ವರುಣ್ ವಿರುದ್ಧ ಉತ್ತರ ಪ್ರದೇಶ ಸರಕಾರ ಹಾಕಿದ್ದ ಎನ್ ಎಸ್ಎ ಕಾಯ್ದೆಯನ್ನು ತೆರವುಗೊಳಿಸಿತ್ತು.
(ಏಜನ್ಸೀಸ್)
ಕಾಂಗ್ರೆಸ್ ಪಕ್ಷ ಹಾಸಿಗೆ ಹಿಡಿದಿದೆ, ವರುಣ್