ಬುದ್ದಿವಂತರಿಗಿಂತಲೂ ದಡ್ಡರ ಸಂಖ್ಯೆಯೇ ಅಧಿಕ
* ಚಿದಂಬರ ಬೈಕಂಪಾಡಿ, ಮಂಗಳೂರು
ಮೊದಲ ಎರಡು ಸ್ಥಾನಗಳಿಗೂ ಮೂರನೇ ಸ್ಥಾನಕ್ಕೂ ಭಾರೀ ಅಂತರವಿರುವುದನ್ನು ಗುರುತಿಸಬಹುದು(ಶೇ.80.62-ಶೇ.65.16). ಈ ಅಂತರ ಇಡೀ ರಾಜ್ಯದಲ್ಲಿ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಗಂಭೀರವಾಗಿ ಸ್ಟಡಿ ಮಾಡುವ ಔಚಿತ್ಯವನ್ನು ಎತ್ತಿತೋರಿಸುತ್ತಿದೆ ಅನ್ನಿಸುತ್ತಿದೆ. ಎರಡನೇ ಸ್ಥಾನಕ್ಕೂ ಮೂರನೇ ಸ್ಥಾನಕ್ಕೂ ಕೇವಲ ಕೂದಲೆಳೆ ಅಂತರವನ್ನು ಸ್ವಾಗತಿಸಬಹುದು, ಆದರೆ ಶೇ.80.62-65.16 ಶೇ ಅಂತರ ಮತ್ತು ಕಟ್ಟಕಡೆಯ ಸ್ಥಾನದಲ್ಲಿರುವ ರಾಯಚೂರು ಜಿಲ್ಲೆಯ ಫಲಿತಾಂಶ ಆ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದಿರುವುದನ್ನು ಸ್ಪಷ್ಟಪಡಿಸುತ್ತದೆ. ಮೊದಲ ಮತ್ತು ಕಡೆಯ ಸ್ಥಾನದ ಅಂತರ ಶೇ.80.92-ಶೇ.29ನ್ನು ಸುಲಭವಾಗಿ ತಗ್ಗಿಸಲು ಸಾಧ್ಯವೇ ಯೋಚಿಸಿ.
ಶೈಕ್ಷಣಿಕವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿ ನಿರಂತರವಾಗಿತ್ತು. ಆದರೆ ಈ ನಿರಂತರ ಮುನ್ನಡೆಗೆ ಕಾರಣವಾಗಿರುವ ಅಂಶಗಳನ್ನು ಅಧ್ಯಯನ ಮಾಡಿ ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಮಾಡಲು ಯಾಕೆ ಸಾಧ್ಯವಿಲ್ಲ ಎನ್ನುವುದು ಮೂಲಭೂತ ಪ್ರಶ್ನೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಇಲ್ಲಿ ತೀವ್ರ ಪೈಪೋಟಿ ಇದೆ. ವಿದ್ಯೆಯ ವ್ಯಾಪಾರೀಕರಣವನ್ನು ಬಲವಾಗಿ ವಿರೋಧಿಸುವ ಪ್ರಕ್ರಿಯೆ ಇದ್ದರೂ ಹೆತ್ತವರ ಕಾಳಜಿ ಮತ್ತು ಮಕ್ಕಳು ಉತ್ತಮ ಸಾಧನೆ ಮಾಡಲೇ ಬೇಕಾದ ಒತ್ತಡದಿಂದಾಗಿ ಇದು ಸಾಧ್ಯವಾಗುತ್ತಿದೆ.
ವೃತ್ತಿಪರ ಕೋರ್ಸ್ಗಳನ್ನೇ ಕಣ್ಣಮುಂದಿರಿಸಿಕೊಂಡು ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವ ಪ್ರವೃತ್ತಿ ಕರಾವಳಿ ಜಿಲ್ಲೆಯಲ್ಲಿದೆ. ಮೆಡಿಕಲ್, ಇಂಜಿನಿಯರಿಂಗ್, ಐಟಿ-ಬಿಟಿಗಳೇ ಹೆತ್ತವರ ಕಣ್ಣಿಗೆ ರಾಚುತ್ತಿವೆ ಈ ಅವಳಿ ಜಿಲ್ಲೆಗಳಲ್ಲಿ. ಮಕ್ಕಳ ಕಣ್ಣುಗಳಲ್ಲೂ ಸುಂದರ ಕನಸುಗಳು. ಈ ಕಾರಣದಿಂದಲೇ ಕಾಮರ್ಸ್ ಸಹಿತ ಸಾಂಪ್ರದಾಯಿಕ ಕೋರ್ಸ್ಗಳಿಗೆ ಹಿನ್ನಡೆ. ಇದು ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ.
ಆದರೆ ಸಾರ್ವತ್ರಿಕವಾಗಿ ಪಿಯುಸಿ ಫಲಿತಾಂಶ ಪ್ರಮಾಣವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಚಿಂತನೆ ಆಗಬೇಕಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದರಿ -ಯಾಗಿಟ್ಟುಕೊಂಡು ಸಮಗ್ರ ಅಧ್ಯಯನ ಮಾಡಿ ಇಲ್ಲಿನ ಫಲಿತಾಂಶದ ಮೂಲಶೋಧಿಸಿ ಇಡೀ ರಾಜ್ಯಕ್ಕೆ ಅನ್ವಯಿಸುವ ತುರ್ತು ಅಗತ್ಯವಿದೆ. ಕಲಿಸುವಿಕೆ ಮತ್ತು ಕಲಿಯುವಿಕೆ ಎರಡೂ ಮುಖ್ಯವಾದ ಪ್ರಕ್ರಿಯೆ. ಮಕ್ಕಳ ಐಕ್ಯೂವಷ್ಟೇ ಮುಖ್ಯವಲ್ಲ. ಶಿಕ್ಷಕರ ಕಲಿಸುವ ಗುಣಮಟ್ಟವೂ ಬಹುಮುಖ್ಯ. ಈ ದಿಕ್ಕಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡಬೇಕು. ಕೇವಲ ಎರಡು ಜಿಲ್ಲೆಗಳಲ್ಲಿ ದಾಖಲಾಗುವ ಭಾರೀ ಫಲಿತಾಂಶದ ಪ್ರಮಾಣ ಒಟ್ಟು ರಾಜ್ಯದ ಫಲಿತಾಂಶವಾಗುವುದಿಲ್ಲ. ಇಡೀ ರಾಜ್ಯದ ಫಲಿತಾಂಶ ಶೇ.43 ಆಗಿರುವುದು ನನ್ನ ಕಳವಳಕ್ಕೆ ಕನ್ನಡಿ.
ಇಡೀ ರಾಜ್ಯದಲ್ಲಿ ಬುದ್ದಿವಂತರಿಗಿಂತಲೂ ದಡ್ಡರ ಸಂಖ್ಯೆಯೇ ಅಧಿಕ ಎನ್ನುವ ಸಂದೇಶ ಈ ಫಲಿತಾಂಶದಿಂದ ರವಾನೆಯಾಗುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಮೇಲೆ ಇದರ ಪರಿಣಾಮ ಉಂಟಾಗುತ್ತದೆ. ತ್ವರಿತವಾಗಿ ಫಲಿತಾಂಶದ ನಡುವಿನ ಅಂತರ ತಗ್ಗಿಸಲು ಅರ್ಥಾತ್ ಫಲಿತಾಂಶ ಏರುದಿಕ್ಕಿನಲ್ಲಿರಲು ಪ್ರಯತ್ನಿಸದಿದ್ದರೆ ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಅಂತರ ದಾಖಲಾಗುತ್ತದೆ. ಬುದ್ದಿವಂತರನ್ನು ಬುದ್ದಿವಂತರನ್ನಾಗಿ ಮಾಡುವುದು ದೊಡ್ಡ ಸಾಧನೆ ಖಂಡಿತಕ್ಕೂ ಅಲ್ಲ. ಸಾಮಾನ್ಯ ಬುದ್ದಿವಂತಿಕೆಯನ್ನು ಮೇಲ್ದರ್ಜೆಗೇರಿಸುವುದು ಅಥವಾ ಐಕ್ಯೂ ಹೆಚ್ಚಿಸುವುದು ಮುಖ್ಯ.
ಸರ್ಕಾರ ಕೇವಲ ಹಣಕಾಸು, ಮೂಲಭೂತ ಸವಲತ್ತು ಒದಗಿಸಿದಾಕ್ಷಣ ಒಳ್ಳೆಯ ಫಲಿತಾಂಶ ಬರುವುದಿಲ್ಲ. ಕಮಿಟೆಡ್ ಫ್ಯಾಕಲ್ಟಿಗೂ ಗಮನ ಕೊಡಬೇಕು. ಈಗಿನ ಫಲಿತಾಂಶ ಕಲಿಯುವವರಿಗಿಂತ ಕಲಿಸುವವರನ್ನೇ ಪ್ರಶ್ನೆಮಾಡುತ್ತಿರುವಂತಿದೆ. ಇದು ಆತಂಕಕಾರಿ ಸಂಗತಿ. ಕಲಿಯುವವರು ಮತ್ತು ಕಲಿಸುವವರು ಏಕಕಾಲದಲ್ಲಿ ಕಲಿಯುತ್ತಿರಬೇಕು. ಅಂಥ ಶಿಕ್ಷಣ ವ್ಯವಸ್ಥೆಯನ್ನು ಹುಟ್ಟು ಹಾಕುವ ಅಗತ್ಯವಿದೆ.