ವಿಜಯಕುಮಾರ್ ಹೃದಯರೋಗಿ : ರೇಣುಕಾಚಾರ್ಯ
ಬೆಂಗಳೂರು, ಮೇ. 5 : ಬಿಜೆಪಿ ಪ್ರಚಾರ ವೇಳೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಉಂಟಾದ ಮಾರಾಮಾರಿಯಲ್ಲಿ ಮೃತಪಟ್ಟ ಜೆಡಿಎಸ್ ಮುಖಂಡ ವಿಜಯಕುಮಾರ್ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಬಿಜೆಪಿಯ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಕುಮಾರ್ ಸಾವಿನ ಕುರಿತು ಸಿಬಿಐ ತನಿಖೆ ವಹಿಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಒಕ್ಕೊರಲಿನ ಆಗ್ರಹವನ್ನು ಅವರು ತಳ್ಳಿ ಹಾಕಿದರು. ಪೋಸ್ಟ್ ಮಾರ್ಟಮ್ ವರದಿ ಪ್ರಕಾರ ವಿಜಯಕುಮಾರ್ ಅವರು ಹೃದಯ ರೋಗಿಯಾಗಿದ್ದರು. ಅಲ್ಲದೇ ಕಳೆದ ನವೆಂಬರ್ ತಿಂಗಳಲ್ಲಿ ಈ ಸಂಬಂಧ ವಿಜಯಕುಮಾರ್ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಕಳೆದ ತಿಂಗಳಲ್ಲಿ 29 ರಂದು ಹರಿಹರದಲ್ಲಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ತೀವ್ರ ಒತ್ತಡದಿಂದ ಅವರಿಗೆ ತೀವ್ರವಾದ ಹೃದಯಾಘಾತವಾಗಿ ಕುಸಿದು ಬಿದ್ದ ಅವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ ಎಂದು ರೇಣುಕಾಚಾರ್ಯ ವಿವರಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಸಿಓಡಿ ತನಿಖೆಗೆ ಒಪ್ಪಿಸಿದ್ದಾರೆ. ಸಿಬಿಐ ತನಿಖೆ ನಡೆಸುವಂತ ಪ್ರಕರಣವಂತೂ ಅಲ್ಲ ಎಂದಿರುವ ರೇಣುಕಾಚಾರ್ಯ, ಸೋಲಿನ ಭೀತಿಯಲ್ಲಿರುವ ಜೆಡಿಎಸ್ ನಾಯಕರು ವಿನಾಕಾರಣ ಈ ವಿಷಯವನ್ನು ದೊಡ್ಡದನ್ನಾಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಕೊಲೆ ಪ್ರಕರಣ : 2 ಅಧಿಕಾರಿಗಳು ಅಮಾನತು