ಪಿಡಬ್ಲ್ಯುಡಿ ಲಂಚಾವತಾರ : ಇಲಾಖಾ ತನಿಖೆಗೆ ಆದೇಶ
ಬೆಂಗಳೂರು, ಮೇ. 5 : ಸಚಿವರ ಸರಕಾರಿ ನಿವಾಸಗಳ ದುರಸ್ತಿ ಹಾಗೂ ಪಿಠೋಪಕರಣ ಖರೀದಿಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ತನಿಖೆ ನಡೆಸಲು ಮುಂದಾಗಿದೆ.
ಇಲಾಖಾ ವಿಚಾರಣೆ ಸಂಬಂಧಿಸಿದಂತೆ ಸೋಮವಾರ ಆದೇಶ ಹೊರಬಿದ್ದಿದ್ದು, ಒಂದು ವಾರದ ಗಡುವು ವಿಧಿಸಲಾಗಿದೆ. ಒಂದು ವಾರದ ನಂತರ ವಿಚಾರಣಾ ವರದಿ ಸರಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ನಿವಾಸಗಳ ನವೀಕರಣ ಹಾಗೂ ಖರೀದಿ ವೆಚ್ಚವನ್ನು ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸವಿದೆ. ಭ್ರಷ್ಟಾಚಾರ ಶಂಕೆ ಇದ್ದು ಸಮಗ್ರ ತನಿಖೆ ಅಗತ್ಯ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹಾಗೂ ವಕ್ಫ್ ಖಾತೆ ಸಚಿವ ಮಮ್ತಾಜ್ ಅಲಿ ಖಾನ್ ಆಗ್ರಹಿಸಿದ್ದರು.
ಮಾಹಿತಿ ಕಾಯ್ದೆಯಡಿ ಸಾರ್ವಜನಿಕರೊಬ್ಬರು ಸಚಿವರ ನಿವಾಸಗಳ ದುರಸ್ತಿ ವೆಚ್ಚದ ಬಗ್ಗೆ ಅರ್ಜಿ ಸಲ್ಲಿಸಿದ್ದರಿಂದ ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರ ಬಹಿರಂಗಗೊಂಡಿತ್ತು. ಈ ಮಾಹಿತಿ ಮಾಧ್ಯಮಗಳಲ್ಲಿ ಬಹಿರಂಗಗೊಂಡ ಮರುದಿನವೇ ಸಚಿವ ಸುರೇಶ್ ಕುಮಾರ್ ತನಿಖೆಗೆ ಆಗ್ರಹಿಸಿದ್ದರು. ಲೋಕೋಪಯೋಗಿ ಇಲಾಖೆ ಖರೀದಿ ಮತ್ತು ನವೀಕರಣಕ್ಕೆ ಯಾವ ಮಾನದಂಡ ಅನುಸರಿಸುತ್ತದೆ ಹಾಗೂ ಅವುಗಳು ಎಷ್ಟು ಪಾರದರ್ಶಕವಾಗಿರುತ್ತವೆ ಎಂಬುದು ಬೆಳಕಿಗೆ ಬಂದರೆ ಸಾರ್ವಜನಿಕ ಜೀವನದಲ್ಲಿ ಪ್ರಮಾಣಿಕತೆ, ಸ್ವಚ್ಛತೆ ಪ್ರತಿಪಾದಿಸುತ್ತ ಬಂದಿರುವ ನನ್ನಂಥವರು ಇಂಥ ಅನಗತ್ಯ ಆರೋಪ ಎದುರಿಸುವುದು ತಪ್ಪುತ್ತದೆ ಎಂದು ಸುರೇಶ್ ಕುಮಾರ್ ತಮ್ಮ ನೋವು ವ್ಯಕ್ತಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)