ಶೇ.3 ರ ಬಡ್ಡಿ ದರದಂತೆ ರೈತರಿಗೆ ಸಾಲ ನೀಡಿ: ಉಗ್ರಪ್ಪ
ಬೆಂಗಳೂರು, ಮೇ. 5 : ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ನೀಡಿರುವ ಭರವಸೆಯಂತೆ ಸಹಕಾರಿ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್ ಗಳಿಂದ ಶೇಕಡಾ 3 ರ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ಸಂಬಂಧಿಸಿದಂತೆ ತಕ್ಷಣ ಆದೇಶ ಹೊರಡಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
ಮುಂಗಡಪತ್ರದಲ್ಲಿ ಶೇ. 3ರ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವುದಾಗಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮೇ ತಿಂಗಳು ಬಂದರೂ ಈ ಸಂಬಂಧ ಸರಕಾರಿ ಆದೇಶ ಹೊರಡಿಸದೆ ಕುಂಭಕರ್ಣ ನಿದ್ರೆಗೆ ಶರಣಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಹಕಾರ ಸಂಘಗಳ ಮೂಲಕ ಶೇ. 3 ರ ಬಡ್ಡಿದರದಲ್ಲಿ ಸಾಲ ನೀಡುವುದಕ್ಕೆ ಇನ್ನೂ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲ. ಈ ಇಲಾಖೆ ಅನುಮೋದನೆ ಸಿಕ್ಕ ನಂತರ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ ಎಂದರು.
ವಾಣಿಜ್ಯ ಬ್ಯಾಂಕ್ ಗಳ ಮೂಲಕ ಸಾಲ ನೀಡುವ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೆ ಸಮಾಲೋಚನೆ ನಡೆಸಿ, ಅಂದಾಜು ಸಾಲದ ಮೊತ್ತಕ್ಕೆ ಬ್ಯಾಂಕ್ ಖಾತರಿ ಒದಗಿಸಿ ಒಡಂಬಡಿಕೆ ಮಾಡಿಕೊಂಡು ಸರಕಾರ ಆದೇಶ ಹೊರಡಿಸಿಬೇಕಿದೆ. ಆದರೆ ಮುಂಗಾರು ಚಟುವಟಿಕೆ ಈಗಾಗಲೇ ಆರಂಭವಾಗಿದ್ದರೂ, ಸರಕಾರ ಈ ಸಂಬಂಧ ಪ್ರಕ್ರಿಯೆಯನ್ನೇ ಇನ್ನೂ ಆರಂಭಿಸಿಲ್ಲ ಎಂದು ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)