ಕೋಮುವಾದಿಗಳನ್ನು ದೂರವಿಟ್ಟು ಸರಕಾರ ರಚನೆ : ಬಂ
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರ ಗದ್ದುಗೆ ಏರುವುದು ಅಸಾಧ್ಯ ಎಂದರು. ಬಿಜೆಪಿಯನ್ನು ಎಲ್ಲರೂ ಸೇರಿ ಸೋಲಿಸುವ ಅವಶ್ಯಕತೆ ಇದೆ. ಜಾತ್ಯಾತೀತ ಪಕ್ಷಗಳು ಮಾತ್ರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಂಗಾರಪ್ಪ ಹೇಳಿದರು. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದ ಅವರು, ಇದನ್ನು ತಡೆಯಲು ಭಗವಂತನಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸದಿಂದ ಹೇಳಿದರು.
ಅತಂತ್ರ ಸಂಸತ್ತು ನಿರ್ಮಾಣವಾದಲ್ಲಿ ಎಡಪಕ್ಷಗಳು ಬಿಜೆಪಿಗಂತೂ ಎಂದಿಗೂ ಬೆಂಬಲ ನೀಡುವುದಿಲ್ಲ. ಚುನಾವಣೆ ನಂತರ ಎಡಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ತೆಕ್ಕೆಗೆ ಸೇರಲಿವೆ ಎಂದು ಬಂಗಾರಪ್ಪ ಹೇಳಿದರು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ತನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಅಖಾಡಕ್ಕಿಳಿಸದಿರುವ ಜೆಡಿಎಸ್ ಕ್ರಮವನ್ನು ಸ್ವಾಗತಿಸಿದ ಅವರು, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದು, ಗಣಿ ರೊಕ್ಕವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಮಾಡಿರುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಬಂಗಾರಪ್ಪ, ಸಂಗಮೇಶ್ ಬಿಜೆಪಿ ನಾಯಕರ ಅಣತಿಯಂತೆ ಕುಣಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಂಗಾರಪ್ಪ ಅವರ ಎದೆಗೆ ಕಲ್ಲು ಎಸೆಯಲಾಗಿತ್ತು. ಕಾಂಗ್ರೆಸ್ ಶಾಸಕರಾಗಿರುವ ಸಂಗಮೇಶ್ ಬಿಜೆಪಿ ಎಜೆಂಟ್ ರಂತೆ ವರ್ತಿಸುತ್ತದ್ದಾರೆ ಎಂದು ಬಂಗಾರಪ್ಪ ಬೆಂಬಲಿಗರು ಪ್ರಚಾರ ಸಭೆ ವೇದಿಕೆ ಹತ್ತಲು ಸಂಗಮೇಶ್ ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಕುಪಿತವಾದ ಸಂಗಮೇಶ್ ಅವರು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿ ಫಾರಂ ನೀಡುವ ವಿಷಯದಲ್ಲಿ 50 ಲಕ್ಷ ರುಪಾಯಿಯನ್ನು ಬಂಗಾರಪ್ಪ ನನ್ನಿಂದ ಪಡೆದಿದ್ದಾರೆ ಎಂದು ಸಂಗಮೇಶ್ ಆರೋಪಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ರೆಡ್ಡಿಗಳನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ