ತಪ್ಪಿದ್ದರೆ ಜೈಲಿಗೆ ಹೋಗುವೆ : ಮೋದಿ
ಅನಂದ್ (ಗುಜರಾತ್), ಏ. 28 : ಗುಜರಾತ್ ನರಮೇಧದಲ್ಲಿ ನನ್ನ ಕೈವಾಡವಿರುವುದು ಸಾಬೀತಾದರೆ ಜೈಲಿಗೆ ಹೋಗಲು ನಾನು ಸಿದ್ಧ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೇ ಪ್ರಕರಣದ ಸಮಗ್ರ ತನಿಖೆಗೆ ಸುಪ್ರಿಂಕೋರ್ಟ್ ನೇಮಿಸಿರುವ ಸಮಿತಿಗೆ ಸೂಕ್ತ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಚುನಾವಣೆ ಪ್ರಚಾರಸಭೆ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಹಾರ ನಡೆಸಿದರು. ಸುಪ್ರಿಂಕೋರ್ಟ್ ನೇಮಿಸಿದ ಸಮಿತಿಗೆ ಎಲ್ಲ ರೀತಿಯಲ್ಲಿ ಸಹಕಾರ ಹಾಗೂ ಬೆಂಬಲ ನೀಡುವೆ. ನಾನಾಗಲಿ, ನನ್ನ ಪಕ್ಷವಾಗಲಿ ಈ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು. ಸಿಬಿಐನ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ಸಮಿತಿ ಪ್ರಕರಣವನ್ನು ವಹಿಸಿರುವ ಸುಪ್ರಿಂಕೋರ್ಟ್ ಮೂರು ತಿಂಗಳೂಳಗೆ ವರದಿ ನೀಡುವಂತೆ ಸೂಚನೆ ನೀಡಿದೆ.
2002 ರಲ್ಲಿ ನಡೆದ ಗೋಧ್ರಾ ನರಮೇಧದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಏನಿತ್ತು ಅನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಅಂದಿನ ಬಿಜೆಪಿ ಸರಕಾರದ ಸಂಪೂರ್ಣ ಕೈವಾಡವಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಆಡಳಿತ ಯಂತ್ರ ಗಲಭೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಆದ್ದರಿಂದ ಪ್ರಕರಣದ ತನಿಖೆ ನಡೆಸಬೇಕು ಎಂದು ಸಮಾಜ ಸೇವಕಿ ತೀಸ್ತಾ ಸೆಟಲ್ವಾಡ್ ಹಾಗೂ ಮೃತ ಸಂಸದರೊಬ್ಬರ ಪತ್ನಿ ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು.
(ದಟ್ಸ್ ಕನ್ನಡ ವಾರ್ತೆ)