ಸಂಪುಟ ಪುನರ್ ರಚನೆ ಕೇವಲ ವದಂತಿ : ಬಿಎಸ್ ವೈ
ಮೈಸೂರು, ಏ. 27 : ಲೋಕಸಭೆ ಚುನಾವಣೆಗಳ ನಂತರ ರಾಜ್ಯ ಸರಕಾರದ ಸಚಿವ ಸಂಪುಟ ಪುನರ್ ರಚನೆ ಆಗಲಿದೆ ಎಂದು ಎದ್ದಿರುವ ಗಾಳಿ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇದು ಕೇವಲ ವದಂತಿಯಷ್ಟೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಸಚಿವ ಸಂಪುಟ ಪುನರ್ ರಚನೆ ಮಾಡುವ ಯಾವ ಚಿಂತನೆಯೇ ಸರಕಾರದ ಮುಂದೆ ಇಲ್ಲ. ಬಳ್ಳಾರಿ ಒಬಳಾಪುರಂ ಮೈನಿಂಗ್ ಕಂಪನಿಯನ್ನು ಕೇಂದ್ರ ಸರಕಾರ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಪ್ರಶ್ನೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ, ಆಂತಹ ಯಾವ ಚಿಂತನೆಯನ್ನು ಮಾಡಿಲ್ಲ ಎಂದರು. ಕೇಂದ್ರ ಸರಕಾರ ಐದು ಮೈನಿಂಗ್ ಕಂಪನಿಗಳ ನಿಷೇಧಿಸಬೇಕು ಎಂದು ಆದೇಶ ನೀಡಿದೆ. ಆದರೆ, ಯಾವ ಮಾನದಂಡದ ಮೇಲೆ ನಿಷೇಧ ಹೇರಿದೆ ಎನ್ನುವುದು ತಿಳಿದಿಲ್ಲ. ನಿಷೇಧ ಹೇರಿದ ಪ್ರತಿ ನಮ್ಮ ಕೈಗೆ ಬರುವವರೆಗೂ ಈ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.
ಮೈನಿಂಗ್ ಕಂಪನಿಗಳಿಗೆ ಬಿಜೆಪಿ ಸರ್ಕಾರ ಅನುಮತಿ ನೀಡಿಲ್ಲ. ಅಕ್ರಮವಾಗಿ ಗಣಿಗಾರಿಕೆ ಮಾಡುವವರ ವಿರುದ್ಧ ರಾಜ್ಯ ಸರಕಾರ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತದೆ ಎಂದು ಯಡಿಯೂರಪ್ಪ ಹೇಳಿದರು. ಆರ್ಥಿಕ ಹಿಂಜರಿತದ ನಡುವೆಯೂ ರಾಜ್ಯದ ಬೊಕ್ಕಸ ತುಂಬಿ ತುಳುಕಾಡುತ್ತಿದೆ. ಮುಂದಿನ ದಿನಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)