ಉಗ್ರ ಅಫ್ಜಲ್ ನನ್ನು ಗಲ್ಲಿಗೇರಿಸಿ : ಅಡ್ವಾಣಿ
ಗಾಂಧಿನಗರ ಲೋಕಸಭೆ ಕ್ಷೇತ್ರದ ವಾದೇಜಾ ಪ್ರದೇಶದಲ್ಲಿ ಚುನಾವಣೆ ಪ್ರಚಾರ ಸಭೆ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಸಂಸತ್ ಹಾಗೂ ಅಕ್ಷರಧಾಮ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಎನ್ ಡಿಎ ಸರ್ಕಾರವಿದ್ದಾಗ. ಅದು ಎಲ್ ಕೆ ಅಡ್ವಾಣಿ ಈ ದೇಶದ ಗೃಹ ಸಚಿವರಾಗಿದ್ದಾಗ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿತ್ತಾರೆ. ಹೌದು, ಅದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಎಂಬ ಅಪರಾಧಿಯನ್ನು ಪೋಷಿಸುತ್ತಿರುವುದು ಏಕೆ ? ಸುಪ್ರಿಂಕೋರ್ಟ್ ಕೂಡಾ ಆತನಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದೆ. ರಾಷ್ಟ್ರಪತಿಗಳೂ ಕೂಡ ಆತನ ಕ್ಷಮಾಪಣೆಯನ್ನು ತಿರಸ್ಕರಿಸಿದ್ದಾರೆ. ಎಲ್ಲ ಪ್ರಕ್ರಿಯೆಗಳು ಮುಗಿದರೂ ಇನ್ನೂ ಆತನನ್ನು ಗಲ್ಲಿಗೇರಿಸಿಲ್ಲ ಏಕೆ ಎನ್ನುವುದನ್ನು ಬಹಿರಂಗಗೊಳಿಸಿ ಎಂದು ಅಡ್ವಾಣಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ದೇಶದ ಹಿತ ಮುಖ್ಯ. ಮತಕ್ಕಾಗಿ ಒಂದು ವರ್ಗದ ಮನ ಗೆಲ್ಲುವ ಸಲುವಾಗಿ ದೇಶವನ್ನು ಬಲಿಕೊಡುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಫ್ಜಲ್ ಆಗಿರಲಿ (ಮುಸ್ಲಿಂ), ಆನಂದ್ ಸಿಂಗ್ (ಸಿಖ್) ಆಗಿರಲಿ, ಇಲ್ಲವೇ ಆನಂದ್ ಮೋಹನ್ (ಬ್ರಾಹ್ಮಣ) ಆಗಿರಲಿ ಕಾನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ತಪ್ಪು ಮಾಡಿದವನು ಉಪ್ಪು ತಿನ್ನಲೇ ಬೇಕು. ಆದ್ದರಿಂದ ಅಫ್ಜಲ್ ಗುರುನನ್ನು ಕೂಡಲೇ ಗಲ್ಲಿಗೇರಿಸಿ ಎಂದು ಅಡ್ವಾಣಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.
(ಏಜೆನ್ಸೀಸ್)