ಅಂತರ್ಜಾತಿ ವಿವಾಹಕ್ಕೆ ಶ್ರೀರಾಮಸೇನೆ ಪೌರೋಹಿತ್ಯ
ಬೆಳಗಾವಿ, ಏ. 27 : ಪ್ರೇಮಿಗಳ ದಿನದಂದು ಪ್ರೇಮಿಗಳು ಕಂಡರೆ ಹಿಡಿದು ಮದುವೆ ಮಾಡಿಸುವುದಾಗಿ ಹೇಳಿ ತೀವ್ರ ಟೀಕೆ, ಆಕ್ರೋಶಕ್ಕೆ ಗುರಿಯಾಗಿದ್ದ ಶ್ರೀರಾಮಸೇನೆ, ಭಾನುವಾರ ಅಂತರ್ಜಾತಿಯ ವಿವಾಹಕ್ಕೆ ಪೌರೋಹಿತ್ಯ ವಹಿಸಿರುವುದು ವಿಶೇಷವಾಗಿದೆ.
ಇಲ್ಲಿನ ಟಿಳಕವಾಡಿ ದತ್ತ ಮಂದಿರದಲ್ಲಿ ಅವಮಾಸ್ಯೆಯಂದು ಈ ಅಂತರ್ಜಾತಿ ವಿವಾಹ ನಡೆದಿದೆ. ಇಂಜಿನಿಯರಿಂಗ್ ಪೂರೈಸಿರುವ ಕಣಬರಗಿಯ ಕುಮಾರ ಪೂಜಾರಿ (25) ಹಾಗೂ ವೈದ್ಯ ಶಿಕ್ಷಣ ಪೂರೈಸಿರುವ ಖುಶ್ಬೂ (23) ಹಿಂದೂ ಸಂಪ್ರದಾಯದಂತೆ ಸಪ್ತಪದಿಗೆ ಕಾಲಿಟ್ಟರು. ವಿವಾಹಕ್ಕೂ ಮೊದಲು ಆಕೆಯ ಹೆಸರನ್ನು ಲಾವಣ್ಯ ಎಂದು ನಾಮಕರಣ ಮಾಡಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಭೂತರಾಯನಹಟ್ಟಿ ರಾಣಿ ಚೆನ್ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿ ಓದುತ್ತಿರುವಾಗ ಇವರಿಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ವಿವಾಹಕ್ಕೆ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗಿತ್ತು. ಆಗ ಶ್ರೀರಾಮಸೇನೆ ಕಾರ್ಯಕರ್ತರಿಗೆ ತಮ್ಮ ಸಂಕಷ್ಟವನ್ನು ತಿಳಿಸಿದ ಪ್ರೇಮಿಗಳು, ಅವಮಾಸ್ಯೆಯಂದು ವಿವಾಹವಾದರು. ಕುಮಾರ್ ಅವರ ಪೋಷಕರು ಹಾಗೂ ಬಂಧುಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ಖುಶ್ಬೂ ಪೋಷಕರು, ಬಂಧುಗಳು ಇರಲಿಲ್ಲ.
(ದಟ್ಸ್ ಕನ್ನಡ ವಾರ್ತೆ)