ಪ್ರಚಾರಕ್ಕಾಗಿ ಹೇಮಾಮಾಲಿನಿ ಕರ್ನಾಟಕಕ್ಕೆ
ಬೆಂಗಳೂರು, ಏ. 27 : ರಾಜ್ಯದಲ್ಲಿ ಏಪ್ರಿಲ್ 30 ರಂದು ನಡೆಯುವ ಎರಡನೇ ಹಂತದ ಚುನಾವಣೆ ಕಾವು ಭರ್ಜರಿಯಾಗಿ ಏರತೊಡಗಿದ್ದು, ಬಿಜೆಪಿ ಪರ ಪ್ರಚಾರ ನಡೆಸಲು ಬಾಲಿವುಡ್ ನಟಿ ರಾಜ್ಯಸಭಾ ಸದಸ್ಯೆ ಹೇಮಾಮಾಲಿನಿ ಅವರು ಏಪ್ರಿಲ್ 28 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಏಪ್ರಿಲ್ 28 ರಂದು ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹಾಗೂ ದಾವಣಗೆರೆ ಕ್ಷೇತ್ರದ ಅಭ್ಯರ್ತಿ ಜಿ ಎಂ ಸಿದ್ದೇಶ ಪರ ಮತಯಾಚನೆ ಮಾಡಲಿದ್ದಾರೆ. ಬಾಲಿವುಡ್ ನಟರ ಪೈಕಿ ಸಲ್ಮಾನ್ ಖಾನ್ ಅವರ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವ ಪರ ಮತಯಾಚಿಸಿದ್ದಾರೆ.
ಬಿಜೆಪಿ ಪರ ಗುರುತಿಸಿಕೊಂಡಿರುವ ಕನ್ನಡ ಚಿತ್ರರಂಗದ ನಟಿಯರಾದ ಶ್ರುತಿ, ತಾರಾ ಹಾಗೂ ಜಗ್ಗೇಶ್ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳು ಆಗಿರುವ ಅಂಬರೀಷ್ ಪರವಾಗಿ ಅವರ ಪತ್ನಿ ಸುಮಲತಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)