ರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಪ್ರಚಾರ ಸಭೆ ನಡೆಸುತ್ತಿರುವ ಬಂಗಾರಪ್ಪ, ಹೋದಲೆಲ್ಲಾ, ಬಿಜೆಪಿ ಸರಕಾರದ ವೈಫಲ್ಯ, ತಾವು ಮುಖ್ಯಮಂತ್ರಿ ಆಗಿದ್ದಾಗ ತಂದಿದ್ದ ಬಗರಹುಕಂ, ಅಕ್ರಮ ಸಕ್ರಮ ಯೋಜನೆಗಳನ್ನು ವಿವರಿಸುತ್ತಾ ಮತ ಕೇಳುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಪ್ಪು ಮಾಡಿದ್ದೀರಿ, ಈ ಬಾರಿ ಅಂತಹ ತಪ್ಪು ಮಾಡಬೇಡಿ. ಸುಳ್ಳು ಹೇಳಿಕೊಂಡು ದುರಾಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಿ ಎಂದು ಬಂಗಾರಪ್ಪ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅವನೊಬ್ಬ ರೆಡ್ಡಿ, ಇವನೊಬ್ಬ ಯಡ್ಡಿ, ಅದೊಂದು ಚಡ್ಡಿ ಈ ಮೂವರಿಗೆ ನಿಮ್ಮ ಮತದ ಮೂಲಕ ಕಾಪಾಳಕ್ಕೆ ಬಿಗಿಯಿರಿ ಎಂದು ಜನಾರ್ದನರೆಡ್ಡಿ, ಯಡಿಯೂರಪ್ಪ ಹಾಗೂ ಆರ್ಎಸ್ಎಸ್ ಬಗ್ಗೆ ಸೋಮವಾರ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಲೇವಡಿ ಮಾಡಿದರು. ಒಂದು ಹಂತದಲ್ಲಿ ಮಾತಿನ ಮೀತಿ ಮೀರಿದ ಬಂಗಾರಪ್ಪ, ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ನಿಂದಿಸಿದರು. ನಂತರ ಅವರ ಮಾತು ತಿರುಗಿದ್ದು, ರಾಮಚಂದ್ರಾಪುರದ ರಾಘವೇಶ್ವರ ಸ್ವಾಮಿಜೀಗಳ ಮೇಲೆ.
ಎರಡು ಗೊಡ್ಡೆಮ್ಮೆ, ಎರಡು ಆಕಳು ಇಟ್ಟುಕೊಂಡು ಫೋಟೋ ತೆಗೆಸಿಕೊಳ್ಳೋ ಸ್ವಾಮಿಯ ಬಳಿ ವೋಟೂ ಇಲ್ಲ, ಏನೂ ಇಲ್ಲ. ಈ ಮಠದ ಬಳಿ ಜನರೇ ಹೋಗೋಲ್ಲ. ಇಂಥ ಬಿಜೆಪಿ ಸ್ವಾಮಿಗೆ ಯಡಿಯೂರಪ್ಪ ಯಾರಪ್ಪನ ಮನೆಯ ದುಡ್ಡು ಎಂದು ಕೋಟಿಗಟ್ಟಲೆ ನೀಡಿದ್ದಾರೆ? ಹೀಗೆ ಮತ್ತೊಮ್ಮೆ ಓತಪ್ರೋತವಾಗಿ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀಗಳನ್ನು ಬಾಯ್ತುಂಬ ಬೈಯ್ದರು.
ಈ ಮಠ ಇದೇ ಎಂದು ನನಗೆ ಗೊತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಸ್ವಾಮೀಜಿ ಆರೆಸ್ಸಸ್ ನಾಯಕ ಸುದರ್ಶನ್ ಅವರನ್ನು ಕರೆದು ದನಗಳ ಪ್ರದರ್ಶನ ಮಾಡಿದಾಗ ಇವರು ಬಿಜೆಪಿ ಸ್ವಾಮಿ ಎಂದು ಗೊತ್ತಾಯಿತು. ಯಾರೂ ಈ ಮಠಕ್ಕೆ ಹೋಗುವುದಿಲ್ಲ. ಇವರ ಹತ್ತಿರ ಯಾವ ವೋಟೂ ಇಲ್ಲ, ಪಾಟೂ ಇಲ್ಲ. ಇದಾದರೂ ಇದ್ದಿದ್ದರೆ ನಮಸ್ಕಾರ ಎನ್ನಬಹುದಿತ್ತು. ಇವರ ಮಾತನ್ನು ಕೂಡ ಯಾರೂ ಕೇಳಲ್ಲ ಎಂದರು. ಇಂಥ ಮಠಕ್ಕೆ ಮುಜರಾಯಿ ದೇವಸ್ಥಾನವಾದ ಗೋಕರ್ಣ ದೇವಸ್ಥಾನವನ್ನು ಯಡಿಯೂರಪ್ಪ ಈ ಮಠಕ್ಕೆ ಕೊಟ್ಟಿದ್ದಲ್ಲದೆ, ಒಟ್ಟು ನಾಲ್ಕು ಕೋಟಿ ಹಣ ನೀಡಿದ್ದಾರೆ. ಇದಕ್ಕೆ ತೆರಿಗೆ ಇದೆಯಾ ಎಂದು ಅವರು ಕಟುಕಿದರು.
(ದಟ್ಸ್ ಕನ್ನಡ ವಾರ್ತೆ)
ಹಾಸ್ಯ
ಲೇಖನ
ಬ೦ಗಾರಣ್ಣನ್
ಬ೦ಡ್ವಾಳ
ನ೦ಗೊತ್ತಿಲ್ವಾ?
ಬಂಗಾರ-ಕುಮಾರ-ಮಧು-ಚಂದ್ರ-ಯಾನ