ಕಸಬ್ ಬಾಲಾಪರಾಧಿ : ಪರೀಕ್ಷೆಗೆ ಕೋರ್ಟ್ ಆದೇಶ
ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಅವರು ಮುಂಬೈ ವಿಶೇಷ ನ್ಯಾಯಾಲಯದ ಎದುರು ಕಸಬ್ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದ ಎದುರು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಲಿಯಾನಿ ಅವರು ಕಸಬ್ ನ ದಂತ ಹಾಗೂ ಮೊಳೆ ಪರೀಕ್ಷಿಸಲು ವೈದ್ಯಕೀಯ ತಪಾಸಣೆಗೆ ವಹಿಸಿದ್ದಾರೆ. ಏಪ್ರಿಲ್ 28ರೊಳಗೆ ವರದಿ ನೀಡುವಂತೆ ಅವರು ತಿಳಿಸಿದ್ದಾರೆ.
ಕಸಬ್ ನ ದಂತ ಮತ್ತು ಮೊಳೆ ಪರೀಕ್ಷಿಸಿ ನಿಖರವಾದ ವಯಸ್ಸು ತಿಳಿಸಲು ನ್ಯಾಯಾಲಯ ಸಂಬಂಧಪಟ್ಟವರಿಗೆ ತಿಳಿಸಿದೆ. ಒಂದು ವೇಳೆ ಕಸಬ್ ಬಾಲಾಪರಾಧಿ ಎಂದು ಸಾಬೀತಾದಲ್ಲಿ ಕಸಬ್ ನ ಕೇವಲ 3 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಈ ಮಧ್ಯೆ ಸರಕಾರಿ ವಕೀಲ ಉಜ್ವಲ್ ನಿಕ್ಕಂ ಅವರು ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿ ಕಸಬ್ ನ ನಿಖರವಾದ ವಯಸ್ಸನ್ನು ದಾಖಲಿಸಲಾಗಿದೆ. ಅದೇ ದಾಖಲೆಯನ್ನು ಪರಿಗಣಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)