ಅಫ್ಜಲ್ ಗುರುನನ್ನು ಗಲ್ಲಿಗೇರಿಸಬೇಕೆ ? ಕಾಂಗ್ರೆಸ್
ಭೋಪಾಲ್, ಏ. 24 : ಸಂಸತ್ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪಾತಕಿ ಅಫ್ಜಲ್ ಗುರುನನ್ನು ನೇಣಿಗೇರಿಸುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ತಕರಾರು ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸಂಸತ್ ಮೇಲಿನ ದಾಳಿ ಖಂಡನೀಯ. ಕಾಂಗ್ರೆಸ್ ಪಕ್ಷ ಆ ಘಟನೆಯನ್ನು ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಅಲ್ಲದೇ ಅಫ್ಜಲ್ ಗುರುನನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ವ್ಯವಹಾರ ಮಾಡುತ್ತಿಲ್ಲ. ಅಫ್ಜಲ್ ಗುರು ಅಷ್ಟೇ ಅಲ್ಲದೇ ಭಯೋತ್ಪಾದನೆ ಕೃತ್ಯ ಎಸಗುವ ಯಾರೇ ಆದರೂ ಅವರನ್ನು ನೇಣಿಗೇರಿಸಿ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ನ್ಯಾಯಾಲಯ ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆ ನೀಡಿದೆ. ಆದರೆ, ಅಫ್ಜಲ್ ಗುರು ಕ್ಷಮಾಪಣೆ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಆತನ ಅರ್ಜಿ ಇನ್ನೂ ರಾಷ್ಟ್ರಪತಿ ಭವನದಲ್ಲಿ ಇರುವುದರಿಂದ ಆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಿಂಗ್ ವಿವರಿಸಿದರು. ಪದೆಪದೇ ಅಫ್ಜಲ್ ಗುರುನನ್ನು ಗಲ್ಲಿಗೇರಿಸಿ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ವಿರುದ್ಧ ಹರಿಹಾಯ್ದ ದಿಗ್ವಿಜಯ ಸಿಂಗ್, ಎನ್ ಡಿಎ ಸರ್ಕಾರದಲ್ಲಿದ್ದಾಗ ಅವರು ಗೃಹ ಸಚಿವರಾಗಿದ್ದರು. ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹತ್ಯೆಗೈದ ಅಪರಾಧಿಗಳು ಕೂಡಾ ರಾಷ್ಟ್ರಪತಿಗಳಿಗೆ ಕ್ಷಮಾಪಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಿಗ್ಯಾಕೆ ಎನ್ ಡಿಎ ಸರಕಾರ ಶಿಕ್ಷೆ ನೀಡಿಲಿಲ್ಲ ಎಂದು ಸಿಂಗ್ ಪ್ರಶ್ನಿಸಿದರು.
(ದಟ್ಸ್ ಕನ್ನಡ ವಾರ್ತೆ)