ರಾಜೀವ ಹತ್ಯೆಯ ಹಂತಕರನ್ನು ಮರೆಯಲು ಸಾಧ್ಯವೇ
ಚೆನ್ನೈ, ಏ. 20 : ಭಾನುವಾರವಷ್ಟೇ ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರನ್ನು ಕೊಂಡಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಇಂದು ಮಾತು ಬದಲಿಸಿದ್ದಾರೆ. ಮಾಜಿ ಪ್ರಧಾನಿಮಂತ್ರಿ ರಾಜೀವ ಗಾಂಧಿ ಹತ್ಯೆ ಹಿಂದೆ ಎಲ್ ಟಿಟಿಇ ಕೈವಾಡವಿರುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪ್ರಭಾಕರನ್ ಕುರಿತು ಸಮರ್ಥಿಸಿಕೊಂಡು ನೀಡಿದ್ದ ಕರುಣಾನಿಧಿ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೇಳುವ ಸೂಚನೆ ಕಂಡು ಬಂದಿತ್ತು.
ಭಾನುವಾರ ಪ್ರಭಾಕರನ್ ಉಗ್ರಗಾಮಿ ಅಲ್ಲ ಎಂದಿದ್ದರು, ಸೋಮವಾರ ಎಲ್ ಟಿಟಿಇ ಉಗ್ರ ಸಂಘಟನೆ ಎಂದು ಹೇಳಿದ್ದಾರೆ. ಪ್ರಭಾಕರನ್ ಮೊದಮೊದಲು ಶ್ರೀಲಂಕಾದಲ್ಲಿರುವ ತಮಿಳರ ಹಕ್ಕಿಗಾಗಿ ಹೋರಾಟ ನಡೆಸಿದರು. ನಂತರ ದಿನಗಳಲ್ಲಿ ಅವರು ಬದಲಾದರು ಎಂದು ನಾನು ಹೇಳಿದ್ದೆ. ಆದರೆ, ಮಾಧ್ಯಮದವರು ತಪ್ಪಾಗಿ ಅರ್ಥೈಸಿ ಪ್ರಕಟಿಸಿದ್ದಾರೆ ಎಂದು ಮಾಧ್ಯಮದ ಮೇಲೆ ಗೂಬೆ ಕೂರಿಸಿದರು. ಲಂಕಾದಲ್ಲಿರುವ ತಮಿಳರ ಪರವಾಗಿ ಹೋರಾಟ ಮಾಡುತ್ತಿರುವುದನ್ನು ಗಮನದಲ್ಲಿರಿಸಿ ಹೇಳಿದ್ದೆ. ಆದರೆ, ರಾಜೀವ ಗಾಂದಿ ಹತ್ಯೆ ಮಾಡಿಲ್ಲ ಎಂದು ಹೇಳಿಯೇ ಇಲ್ಲ ಎಂದು ಕರುಣಾನಿಧಿ ಹೇಳಿದರು.
ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮರೆಯಲಾರದ ಕೃತ್ಯವದು ಎಂದು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಕರುಣಾನಿಧಿ ಅವರು ಪ್ರಭಾಕರನ್ ಅವರನ್ನು ಹಾಡಿಹೊಗಳಿದ್ದರು. ಪ್ರಭಾಕರನ್ ಉಗ್ರಗಾಮಿಯಲ್ಲ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿತ್ತು.
(ದಟ್ಸ್ ಕನ್ನಡ ವಾರ್ತೆ)
ಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ