ಜಿನ್ನಾ ಹೊಗಳಿದ ವ್ಯಕ್ತಿಗೆ ನಮ್ಮ ಧಿಕ್ಕಾರ, ಸೇನೆ
ಬಾಗಲಕೋಟೆ, ಏ. 20 : ದೇಶ ವಿಭಜನೆಗೆ ಕಾರಣರಾದ ಮೊಹ್ಮದ್ ಅಲಿ ಜಿನ್ನಾ ಕೊಲೆಗಡುಕ ಎಂದು ಆರೋಪಿಸಿರುವ ಶ್ರೀರಾಮಸೇನೆ ಕಾರ್ಯಕರ್ತರು, ಎಲ್ ಕೆ ಅಡ್ವಾಣಿ ವಿರುದ್ಧ ಸಿಡಿದೆದ್ದಿದ್ದಾರೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪಿ ಸಿ ಗದ್ದೀಗೌಡರ ಪರವಾಗಿ ಪ್ರಚಾರಕ್ಕೆ ಬಂದು ಎಲ್ ಕೆ ಅಡ್ವಾಣಿ ತಿರುಗಾಡಿದ ಎಲ್ಲ ಸ್ಥಳವನ್ನು ಶ್ರೀರಾಮಸೇನೆ ಕಾರ್ಯಕರ್ತರು ಗೋಮೂತ್ರ ಹಾಗೂ ಗಂಗಾಜಲ ಸಿಡಿಸುವ ಮೂಲಕ ಪವಿತ್ರಗೊಳಿಸಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಎಲ್ ಕೆ ಅಡ್ವಾಣಿ ಅವರು, ಜಿನ್ನಾ ಅವರನ್ನು ಜಾತ್ಯಾತೀತ ವ್ಯಕ್ತಿ ಎಂದು ಬಣ್ಣಿಸಿರುವುದು ಶ್ರೀರಾಮಸೇನೆ ಕಾರ್ಯಕರ್ತರ ಆಕ್ರೋಶ ಕಾರಣವಾಗಿದೆ. ಸುಮಾರು 30 ಕೋಟಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ 10 ಕೋಟಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲು ಕಾರಣರಾದ ಮೊಹ್ಮದ್ ಅಲಿ ಜಿನ್ನಾ ಅವರಂತ ಕೊಲೆಗಡುಕರನ್ನು ಜಾತ್ಯಾತೀತ ವ್ಯಕ್ತಿ ಎಂದು ಅಡ್ವಾಣಿ ಬಣ್ಣಿಸಿರುವುದು ದೇಶಕ್ಕೆ ಮಾಡಿರುವ ಅಪಮಾನ ಎಂದು ಕಾರ್ಯಕರ್ತರ ಪಿತ್ತನೆತ್ತಿಗೇರಲು ಕಾರಣವಾಗಿದೆ
ಇಂತಹ ವ್ಯಕ್ತಿ ಇಂದು ನಮ್ಮೂರಿಗೆ ಕಾಲಿಟ್ಟಿದ್ದು, ಹಿಂದೂಗಳಿಗೆ ಅವಮಾನ ಮಾಡಿದಂತೆ, ಈ ಹಿನ್ನೆಲೆಯಲ್ಲಿ ಅವರು ಓಡಾಡಿರುವ ಎಲ್ಲ ಸ್ಥಳಗಳನ್ನು ಶುದ್ಧೀಕರಣ ಮಾಡಲಾಗುತ್ತಿದೆ ಎಂದು ಶ್ರೀರಾಮಸೇನೆ ಮುಖಂಡ ಉಮೇಶ್ ಹೇಳಿದ್ದಾರೆ. ಅಖಂಡ ಭಾರತ ತುಂಡಾತುಂಡಾಗಲು ಜಿನ್ನಾ ಕಾರಣರಾಗಿದ್ದಾರೆ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅಂಥ ವ್ಯಕ್ತಿಗೆ ಅಡ್ವಾಣಿ ಜಾತ್ಯಾತೀತ ನಾಯಕ ಎಂದು ಹೇಳಿರುವುದು ಅಕ್ಷಮ್ಯ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಅಭಿಮತವಾಗಿದೆ. ಪಬ್ ದಾಳಿ ಹಾಗೂ ಚರ್ಚೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಶ್ರೀರಾಮಸೇನೆ ದೇಶಾದ್ಯಂತ ಕುಖ್ಯಾತಿ ಪಡೆದಿತ್ತು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು