ಇಸ್ರೋ ಬೇಹುಗಾರಿಕೆ ಉಪಗ್ರಹ ಯಶಸ್ವಿ ಉಡಾವಣೆ
ನವದೆಹಲಿ, ಏ. 20 : ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಇಸ್ರೋ ಸೋಮವಾರ ಬೆಳಿಗ್ಗೆ 6.45ಕ್ಕೆ ಪೋಲಾರ್ ಲಾಂಚ್ ಸೆಟಲೈಟ್ ವೆಹಿಕಲ್ (ಪಿಎಸ್ಎಲ್ ವಿ-ಸಿ12) ಮುಖಾಂತರ ರಿಸಾಟ್-2 ಮತ್ತು ಅನುಸ್ಯಾಟ್ ಎಂಬ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಅಂತರಿಕ್ಷಕ್ಕೆ ಹಾರಿಬಿಟ್ಟಿದೆ.
ಈ ಹಿಂದೆ ನಾವು ನಿಗದಿಪಡಿಸಿದ ದಿನಾಂಕ ಮತ್ತು ಸಮಯದ೦ದೇ ಉಪಗ್ರವನ್ನು ಕಕ್ಷೆಗೆ ಉಡಾಯಿಸುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಜಿ. ಮಾಧವನ್ ನಾಯರ್ ಹರ್ಷಚಿತ್ತರಾಗಿ ಹೇಳಿದ್ದಾರೆ. ಈ ಬೇಹುಗಾರಿಕಾ ಉಪಗ್ರಹ 24 ಗಂಟೆಯೂ ತನ್ನ ಗಡಿಪ್ರದೇಶಗಳ ಮೇಲೆ ಕಣ್ಣಿರಿಸಲಿದೆ. ಅಕ್ರಮ ಗಡಿ ಪ್ರವೇಶ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಲಿದೆ.
ರಿಸ್ಯಾಟ್ 2 ಉಪಗ್ರಹವು ಎಲ್ಲಾ ಹಗಲು ರಾತ್ರಿ ಮಾತ್ರವಲ್ಲ, ಮೋಡ, ಮಂಜು ಮುಸುಕಿದ್ದರೂ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲಂತಹ ಸಾಮರ್ಥ್ಯ ಹೊಂದಿದೆ. ಭೂಮಿಯಿಂದ 550 ಕಿ.ಮೀ. ದೂರದ ಕಕ್ಷೆಯಲ್ಲಿರುವ ರಿಸ್ಯಾಟ್ ಉಪಗ್ರಹ ಪ್ರವಾಹ, ಸೈಕ್ಲೋನ್ ಮತ್ತಿತರ ವಿಕೋಪ ನಿರ್ವಹಣೆ ಕುರಿತಂತೆ ಇಸ್ರೋಗೆ ಹೆಚ್ಚಿನ ಮಾಹಿತಿ ಒದಗಿಸಲಿದೆ. ಇದನ್ನು ರಕ್ಷಣಾ ಕಾರ್ಯ ಮತ್ತು ವಿಚಕ್ಷಣ ಕಾರ್ಯಕ್ಕಾಗಿ ಬಳಸಲಾಗುತ್ತದೆ. 40 ಕೆಜಿ ತೂಕದ ಅನುಸತ್ ಉಪಗ್ರಹವನ್ನು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ್ದು, ಇದು ಬರಪೀಡಿತ ಬಂಜರು ಭೂಮಿಯ ಕುರಿತು ಮಾಹಿತಿ ರವಾನಿಸಲಿದೆ.
(ದಟ್ಸ್ ಕನ್ನಡ ವಾರ್ತೆ)