ಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ
ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ ಎಂದು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಎಲ್ ಟಿಟಿಇ ಮತ್ತು ಲಂಕಾ ಸೇನೆಗಳ ನಡುವೆ ನಡೆಯುತ್ತಿರುವ ಕಾಳಗದಲ್ಲಿ ಪ್ರಭಾಕರನ್ ಮೃತಪಟ್ಟರೆ, ತುಂಬಾ ನೋವಾಗುತ್ತದೆ. ತಮಿಳರ ನಡುವಿನ ಒಗ್ಗಟ್ಟಿನ ಕೊರತೆಯಿಂದಾಗಿ ಪ್ರಭಾಕರನ್ ಸಾವು ಸಂಭವಿಸುತ್ತದೆಯೇ ಹೊರತು, ಲಂಕಾ ಸೇನೆಯ ಸಾಮರ್ಥ್ಯದಿಂದ ಅಲ್ಲ ಎಂದು ಕರುಣಾನಿಧಿ ಹೇಳಿದ್ದಾರೆ.
ಕಾಂಗ್ರೆಸ್ ವಿರೋಧ
ಪ್ರಭಾಕರನ್ ಭಯೋತ್ಪಾದಕನಲ್ಲ ಎಂಬ ಕರುಣಾನಿಧಿ ಹೇಳಿಕೆಗೆ ಡಿಎಂಕೆ ಮಿತ್ರ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಪ್ರಭಾಕರನ್ ಒಬ್ಬ ಭಯೋತ್ಪಾದಕ. ಎಲ್ ಟಿಟಿಇ ಒಂದು ಉಗ್ರಗಾಮಿ ಸಂಘಟನೆ ಎಂಬುದು ಕಾಂಗ್ರೆಸ್ ಪಕ್ಷದ ದೃಢವಾದ ನಂಬಿಕೆ. ಕರುಣಾನಿಧಿ ಅವರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಚೆನ್ನೈ ಸಮೀಪವಿರುವ ಶ್ರೀಪೆರಂಬೂರು ಎಂಬಲ್ಲಿ ಎಲ್ ಟಿಟಿಇ ಸಂಘಟನೆಯ ಮಾನವ ಆತ್ಮಾಹುತಿ ಬಾಂಬ್ ಗಳಿಂದ ಅವರನ್ನು ಛಿದ್ರ ಛಿದ್ರಗೊಳಿಸಿತ್ತು.
(ದಟ್ಸ್ ಕನ್ನಡ ವಾರ್ತೆ)