ಭಾರೀ ಮಳೆಗೆ ರಾಜ್ಯದಲ್ಲಿ ಆರು ಜನರ ಬಲಿ
ಬೆಂಗಳೂರು, ಏ. 20 : ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಸಿಡಿಲಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸಾಯಂಕಾಲ ಸುಮಾರು ಒಂದು ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ನಗರ ಹೊರವಲಯದಲ್ಲಿ ಯಲಹಂಕ ಬಳಿ ಇರುವ ದೊಡ್ಡಬೆಟ್ಟಹಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದು ತೇಜ ಮೂರ್ತಿ(5), ವಿನುತಾ(6) ಮತ್ತು ಜಯಮ್ಮ ಎಂಬುವವರು ಅಸುನೀಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸತ್ತಿದ್ದಾರೆ. ಅವರಲ್ಲಿ ಒಬ್ಬಳನ್ನು ಲಕ್ಷ್ಮಿ (20) ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ದಾಸೇಗೌಡ ಎಂಬಾತನೂ ಸಿಡಿಲು ಬಡಿದು ಮೃತನಾಗಿದ್ದಾನೆ. ಎತ್ತಿನಬಂಡಿಯಲ್ಲಿ ಮನೆಗೆ ಮರಳುತ್ತಿದ್ದಾಗ ಆತನಿಗೆ ಸಿಡಿಲು ಬಡಿದಿದೆ.
ಬೆಂಗಳೂರು ನಗರ, ಗ್ರಾಮೀಣ ಪ್ರದೇಶ, ಮೈಸೂರು, ಗುಲಬರ್ಗಾ, ಬಿಜಾಪುರ, ಬಾಗಲಕೋಟೆಗಳಲ್ಲಿ ಮಳೆಯಾಗುತ್ತಿರುವ ವರದಿ ಬಂದಿದೆ. ಬೆಂಗಳೂರಿನಲ್ಲಿ ಭಾರೀ ಗಾಳಿಗೆ ಅನೇಕ ಕಡೆಗಳಲ್ಲಿ ಮರಗಳು ಉರುಳಿದ್ದರಿಂದ ಭಾನುವಾರ ರಾತ್ರಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಹವಾಮಾನ ಮುನ್ಸೂಚನೆಯ ಪ್ರಕಾರ, ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸೂಚನೆಯಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ್ದು ಸಾಯಂಕಾಲ ಮಳೆಯಾಗುವ ಸಾಧ್ಯತೆಯಿದೆ.
(ಏಜೆನ್ಸೀಸ್)